ಬೆಂಗಳೂರು: ಮುಂಬರುವ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಋತುವಿನ ಮೊದಲ 2 ಪಂದ್ಯಗಳಿಗೆ ಅನುಭವಿ ಆರಂಭಿಕ ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. 16 ಆಟಗಾರರ ತಂಡದಲ್ಲಿ ನಾಲ್ವರು ಹೊಸ ಆಟಗಾರರಿಗೆ ಮಣೆ ಹಾಕಲಾಗಿದೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕೆ. ಗೌತಮ್ ಮತ್ತು ವಿಕೆಟ್ ಕೀಪರ್ ಬಿಆರ್ ಶರತ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಧಾರವಾಡ ವಲಯದ 23 ವರ್ಷದ ಎಡಗೈ ಸ್ಪಿನ್ನರ್ ರೋಹಿತ್ ಕುಮಾರ್ ಎ.ಸಿ, ಬೆಳಗಾವಿಯ ವಿಕೆಟ್ ಕೀಪರ್ ಸುಜಯ್ ಸಾತೇರಿ, 21 ವರ್ಷದ ಆ್ ಸ್ಪಿನ್ನರ್ ಶಶಿಕುಮಾರ್ ಕೆ ಮತ್ತು ಮೈಸೂರಿನ ವೇಗದ ಬೌಲಿಂಗ್ ಆಲ್ರೌಂಡರ್ ಕಿಶನ್ ಬಿದಾರೆ ತಂಡದಲ್ಲಿ ಸ್ಥಾನ ಸಂಪಾದಿಸಿರುವ ಹೊಸಮುಖಗಳಾಗಿದ್ದಾರೆ. 32 ಆಟಗಾರರ ಸಂಭಾವ್ಯರ ತಂಡದಲ್ಲೇ ಹಲವು ಹೊಸಬರಿಗೆ ಮಣೆ ಹಾಕಿದ್ದ ಆಯ್ಕೆಗಾರರು, ಟೂರ್ನಿಯ ಮೊದಲೆರಡು ಪಂದ್ಯಗಳಿಗೂ ಯುವ ಆಟಗಾರರಿಗೆ ಒತ್ತು ನೀಡಿದ್ದಾರೆ.
ಸಂಭಾವ್ಯ ತಂಡದಲ್ಲಿದ್ದ ಕೆಎಲ್ ರಾಹುಲ್ ಮತ್ತು ವೇಗಿ ಪ್ರಸಿದ್ಧ ಕೃಷ್ಣ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಷ್ಟ್ರೀಯ ತಂಡದ ಪರ ಆಡುತ್ತಿರುವುದರಿಂದ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕರ್ನಾಟಕ ತಂಡ ಜನವರಿ 5ರಿಂದ 8ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆಡಲಿದ್ದರೆ, 2ನೇ ಪಂದ್ಯದಲ್ಲಿ ಜನವರಿ 12ರಿಂದ 15ರವರೆಗೆ ಅಹಮದಾಬಾದ್ನಲ್ಲಿ ಆತಿಥೇಯ ಗುಜರಾತ್ ತಂಡವನ್ನು ಎದುರಿಸಲಿದೆ.
ಶ್ರೇಯಸ್ ಗೋಪಾಲ್ ಕೇರಳಕ್ಕೆ ವಲಸೆ ಹೋಗಿರುವುದರಿಂದ ಕರ್ನಾಟಕ ತಂಡ ಈ ಬಾರಿ ಹೊಸ ಸ್ಪಿನ್ ವಿಭಾಗದೊಂದಿಗೆ ಕಣಕ್ಕಿಳಿಯಲಿದೆ. ಶುಭಾಂಗ್ ಹೆಗ್ಡೆಗೆ ಶಶಿಕುಮಾರ್ ಮತ್ತು ರೋಹಿತ್ ಕುಮಾರ್ ಸಾಥ್ ನೀಡಲಿದ್ದಾರೆ.
ನಿಕಿನ್ ಜೋಸ್ ಉಪನಾಯಕ
ರಾಜ್ಯದ ಭರವಸೆಯ ಯುವ ಬ್ಯಾಟರ್ ನಿಕಿನ್ ಜೋಸ್ ರಣಜಿ ತಂಡಕ್ಕೆ ಹೊಸ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಆರ್. ಸಮರ್ಥ್, ದೇವದತ್ ಪಡಿಕಲ್, ನಿಕಿನ್ ಜೋಸ್ (ಉಪನಾಯಕ), ಮನೀಷ್ ಪಾಂಡೆ, ಶುಭಾಂಗ್ ಹೆಗ್ಡೆ, ಶರತ್ ಶ್ರೀನಿವಾಸ್ (ವಿ.ಕೀ), ವೈಶಾಕ್ ವಿಜಯ್ಕುಮಾರ್, ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ, ಶಶಿಕುಮಾರ್ ಕೆ, ಸುಜಯ್ ಸಾತೇರಿ (ವಿ.ಕೀ), ಡಿ. ನಿಶ್ಚಲ್, ಎಂ. ವೆಂಕಟೇಶ್, ಕಿಶನ್ ಎಸ್. ಬಿದರೆ, ರೋಹಿತ್ ಕುಮಾರ್ ಎಸಿ; ಕೋಚ್: ಪಿವಿ ಶಶಿಕಾಂತ್, ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಫೀಲ್ಡಿಂಗ್ ಕೋಚ್: ಶಬರೀಷ್ ಪಿ. ಮೋಹನ್, ಮ್ಯಾನೇಜರ್: ಎ. ರಮೇಶ್ ರಾವ್.