ವಿಜಯಪುರ: ಬಿಜೆಪಿ ಸರ್ಕಾರ ಕೊವಿಡ್ ಸಮಯದಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿ ಹಗರಣ ಮಾಡಿದೆ ಎಂದು ಅದೇ ಪಕ್ಷದ ರಾಜ್ಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ರಾಜ್ಯ ಹಾಗೂ ಕೇಂದ್ರ ನಾಯಕರು ಮೌನವಹಿಸಿದ್ದು ನೋಡಿದರೆ ಮೌನಂ ಸಮ್ಮತಿ ಲಕ್ಷ್ಮಣಂ ಎಂಬುದು ಸಾಬೀತಾಗಿ ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ತಿಳಿಸಿದರು.
ಯತ್ನಾಳರ ಆರೋಪ ಸಣ್ಣದಲ್ಲ. ಇದೊಂದು ಗಂಭೀರ ವಿಷಯ. ಆರೋಗ್ಯ ಇಲಾಖೆ ಹಾಗೂ ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಯತ್ನಾಳ ಹೇಳಿದ್ದಾರೆ. ಹೀಗಾಗಿ ಮೊದಲು ಯತ್ನಾಳರನ್ನೇ ತನಿಖೆಗೆ ಒಳಪಡಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ತಮ್ಮನ್ನು ಪಕ್ಷದಿದ ನೋಟಿಸ್ ಕೊಡುವುದಾಗಲಿ, ಹೊರಹಾಕುವುದಾಗಲಿ ಮಾಡಿದರೆ ಬಣ್ಣ ಬಯಲು ಮಾಡುವೆ ಎಂದು ಯತ್ನಾಳ ಎಚ್ಚರಿಸಿದ್ದಾರೆ. ಹೀವಾಗಿ ಧಮ್ ಇದ್ದರೆ ಬಿಜೆಪಿಯವರು ಯತ್ನಾಳ ಮೇಲೆ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ತಾವೂ ಇದರಲ್ಲಿ ಪಾಲುದಾರರು ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.
ಯತ್ನಾಳ ಕೂಡ ಮೊದಲ ಬಾರಿ ಚುನಾವಣೆಗೆ ನಿಂತಾಗ ಘೋಷಿಸಿದ ಆಸ್ತಿ ಮತ್ತು ಈಗಿರುವ ಆಸ್ತಿಯನ್ನು ಘೋಷಿಸಬೇಕು. ಆ ಮೂಲಕ ಕಳಂಕ ರಹಿತ ಎಂದು ತೋರಿಸಬೇಕು. ಚಿಂಚೋಳಿಯಲ್ಲಿ 2000 ಕೋಟಿ ವೆಚ್ಚದ ಕಾರ್ಖಾನೆ ಸ್ಥಾಪಿಸಲು ಹಣ ಎಲ್ಲಿಂದ ಬಂತು? ಸಿದ್ದಸಿರಿಯಲ್ಲಿ ಹಣ ಎಷ್ಟಿದೆ ಎಂಬುದು ಬಹಿರಂಗಪಡಿಸಿ ತಮ್ಮ ಪ್ರಾಮಾಣಿಕತೆ ಸಾಬೀತು ಪಡಿಸಲು ಮನವಿ ಮಾಡುವುದಾಗಿ ಗಣಿಹಾರ ಹೇಳಿದರು.
ರೈತರ ವಿಷಯ
ಶಿವಾನಂದ ಪಾಟೀಲರ ವಿರುದ್ದ ಮಾತನಾಡುತ್ತಾ ರೈತರ ಕಾಳಜಿ ತೋರುವ ಯತ್ನಾಳರು ದೇಶದ ರಾಜಧಾನಿಯಲ್ಲಿಯೇ ಎರಡು ವರ್ಷ ರೈತರು ಹೋರಾಟ ಮಾಡಿದಾಗ, ಸಾವಿಗೀಡಾದಾಗ ಏಕೆ ಕಾಳಜಿ ತೋರಲಿಲ್ಲ. ರೈತರು ವಿರೋಧಿ ನೀತಿ ಜಾರಿಗೊಳಿಸಿದ್ದಾಗ ಯಾಕೆ ಕಾಳಜಿ ಬರಲಿಲ್ಲ ಎಂದು ಪ್ರಶ್ನಿಸಿದರು.
ಇನ್ನು ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಕುರಿತು ಮಾಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದ ಗಣಿಹಾರ ಇಂಥ ವರ್ತನೆಯನ್ನು ಹಿಂದು ಸಮಾಜದ ಪ್ರಜ್ಞಾವಂತರು ಸಹ ಖಂಡಿಸಬೇಕೆಂದರು.
ಮುಖಂಡರಾದ ಫಯಾಜ್ ಕಲಾದಗಿ ಹಾಗೂ ನಾಗರಾಜ ಲಂಬು ಇದ್ದರು.