ಶ್ರೀನಿವಾಸಪುರ : ಮುಂದಿನ ಚುನಾವಣೆ ವೇಳೆಗೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಇರುವಷ್ಟು ದಿನ ಜನರ ಆರೋಗ್ಯ ಮತ್ತು ಗ್ರಾಮಗಳ ಸ್ಚಚ್ಛತೆ ಕಾಪಾಡುವಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಬದ್ಧತೆ ಇರಬೇಕು. ಎಲ್ಲ ಗ್ರಾಮಗಳಿಗೂ ವೈಜ್ಞಾನಿಕ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿಬೇಕು ಎಂದು ಅಧಿಕಾರಿಗಳಿಗೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸೂಚಿಸಿದರು.
ತಾಲೂಕಿನ ಹೊಗಳಗೆರೆ ಮಾವು ಸಂಶೋಧನಾ ಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ, 34 ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ಘಟಕ ಆರಂಭಿಸಲು ಸರ್ಕಾರಿ ಜಮೀನುಗಳ ವಿವರ ಪಡೆದು ಜಮೀನು ಕೊರತೆ ಇರುವಲ್ಲಿ ಅರಣ್ಯ ಇಲಾಖೆ ಜಮೀನು ಪಡೆಯಬೇಕು. ಆದರೆ, ಅರಣ್ಯ ನಾಶ ಮಾಡದಂತೆ ಘಟಕ ಸ್ಥಾಪಿಸಬೇಕು ಎಂದು ಇಒ ಆನಂದ್ಗೆ ಸೂಚಿಸಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ವೈಜ್ಞಾನಿಕವಾಗಿ ಚರಂಡಿ ನಿರ್ಮಿಸುವ ಅಗತ್ಯವಿದೆ. ಅಲ್ಲದೆ, ಕೆಲ ಗ್ರಾಮಗಳಲ್ಲಿ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ವಾರದೊಳಗೆ ಎಸ್ಸಿಪಿ, ಟಿಎಸ್ಪಿ ಹಾಗೂ 14ನೇ ಹಣಕಾಸಿನ ಯೋಜನೆಯಲ್ಲಿ ಗ್ರಾಮಗಳ ಕ್ರೀಯಾಯೋಜನೆ ತಯಾರಿಸಬೇಕು ಎಂದರು.
ಜಿಲ್ಲೆಯಲ್ಲಿ ನೀರಿನ ಕೊರತೆಯಿಂದ ರೈತರು ನಗರಕ್ಕೆ ವಲಸೆ ಹೋಗಿರುವುದನ್ನು ತಪ್ಪಿಸಲು ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೆ ಜನ್ನಘಟ್ಟ ಕೆರೆ ತುಂಬಿ ಮುದುವಾಡಿ ಕೆರೆಗೆ ಜ.16ರಂದು ಕೆಸಿ ವ್ಯಾಲಿ ನೀರು ಹರಿಯಲಿದೆ. ಆದ್ದರಿಂದ ಚಿಲ್ಲಪಲ್ಲಿ, ಮುದುವಾಡಿ ಕೆರೆಯಲ್ಲಿ ಬೆಳೆದಿರುವ ನೀಲಗಿರಿ, ಜಾಲಿ ಮರಗಳನ್ನು 10 ದಿನದೊಳಗೆ ತೆರವುಗೊಳಿಸಬೇಕು ಎಂದು ಸಾಮಾಜಿಕ ಅರಣ್ಯಾಧಿಕಾರಿ ದೇವರಾಜಗೆ ಸೂಚಿಸಿದರು.
ಶ್ರೀನಿವಾಸಪುರ ಕ್ಷೇತ್ರದ ಪದವಿ ಹಾಗೂ ಪದವಿಪೂರ್ವ ಮತ್ತು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕಾಲೇಜುಗಳ ಸಮಸ್ಯೆ ಬಗ್ಗೆ ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರಿಂದ ಮಾಹಿತಿ ಕಲೆ ಹಾಕಬೇಕು. ಜತೆಗೆ ಶಾಸಕರು ಪಟ್ಟಣದ ಬಾಲಕರ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜುಗಳ ಫಲಿತಾಂಶದ ಅಂಕಿ-ಅಂಶಗಳ ವಿವರ ಪಡೆಯಬೇಕು. ಗೌನಿಪಲ್ಲಿ, ಸೋಮಯಾಜಲಪಲ್ಲಿ, ಮುತ್ತಕಪಲ್ಲಿ ಕಾಲೇಜುಗಳು ಗಡಿಯಲ್ಲಿದ್ದರೂ ಉತ್ತಮ ಫಲಿತಾಂಶ ನೀಡುತ್ತಿವೆ. ಆದರೆ, ನಗರದ ಕಾಲೇಜುಗಳಿಗೆ ಏನಾಗಿದೆ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಜೆ. ಮಂಜುನಾಥ್, ಜಿಪಂ ಸಿಇಒ ದರ್ಶನ್, ಉಪವಿಭಾಗಾಧಿಕಾರಿ ಸೋಮಶೇಖರ್, ತಹಸೀಲ್ದಾರ್ ಕೆ.ವಿ. ಸುಜಾತಾ, ಕೋಲಾರ ತಹಸೀಲ್ದಾರ್ ಶೋಭನಾ, ಬಿಇಒ ನಾಗರಾಜಗೌಡ, ಜಿಪಂ ಸದಸ್ಯ ಗೋವಿಂದಸ್ವಾಮಿ, ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ದಿಂಬಾಲ ಅಶೋಕ್, ತಾಪಂ ಅಧ್ಯಕ್ಷ ನರೇಶ್, ಮಾಜಿ ಸದಸ್ಯ ಕೆ.ಕೆ. ಮಂಜು ಇದ್ದರು.
ಲಿತಾಂಶ ಗಟ್ಟಿಯಾಗಲಿ: ಕ್ಷೇತ್ರದಲ್ಲಿರುವ ಸರ್ಕಾರಿ ಪ್ರೌಢ, ಹಿರಿಯ ಮತ್ತು ಕಿರಿಯ ಶಾಲೆಗಳಿಗೆ ನರೇಗಾ ಯೋಜನೆಯಲ್ಲಿ ಕಾಂಪೌಂಡ್, ಗೇಟ್, ಸಿಸಿ ಕ್ಯಾಮರಾ ಅಳವಡಿಕೆಗೆ ಸಾಮಾಜಿಕ ಅನುದಾನದಲ್ಲಿ ಮಂಜೂರು ಮಾಡಿಸಲಾಗುವುದು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿರುವುದು ಸ್ವಾಗತಾರ್ಹ. ಆದರೆ, ಅದು ಗಟ್ಟಿಯಾದ ಫಲಿತಾಂಶವಾಗಬೇಕು ಎಂದು ಮಾಜಿ ಸ್ಪೀಕರ್ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿಗೆ ಹೇಳಿದರು.