ವಿಜಯನಗರ: ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಗೃಹಿಣಿಯನ್ನು ಮಾಜಿ ಪ್ರಿಯಕರನೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ.
ಪ್ರತಿಭಾ (27) ಕೊಲೆಯಾದ ಮೃತ ದುರ್ದೈವಿ. ಚಿರಸ್ತಹಳ್ಳಿ ಮೂಕಪ್ಪನವರ ಹನುಮಂತಪ್ಪ ಕೊಲೆ ಆರೋಪಿ. ರಾಣೆಬೆನ್ನೂರಿನ ಪ್ರತಿಭಾ ತನ್ನ ಪುತ್ರನೊಂದಿಗೆ ದುಗ್ಗಾವತಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಪ್ರತಿಭಾ ಮೇಲೆ ಹನುಮಂತ ಏಕಾಏಕಿ ದಾಳಿ ಮಾಡಿ ಕೊಲೆ ಮಾಡಿದ್ದಾನೆ.
ಹತ್ಯೆಯ ಬಳಿಕ ಪರಾರಿ ಆಗಿದ್ದ ಹನುಮಂತಪ್ಪನನ್ನು ತಾಲೂಕಿನ ನೀಲಗುಂದ ಕ್ರಾಸ್ ಬಳಿ ಬಂಧಿಸಲಾಗಿದೆ. ಪ್ರತಿಭಾಳನ್ನು ನಾನು ಪ್ರೀತಿಸುತ್ತಿದ್ದೆ ಅಂತ ಹನುಮಂತಪ್ಪ ಹೇಳಿಕೊಂಡು ತಿರುಗಾಡುತ್ತಿದ್ದ. ಆದರೆ, ಬೇರೆ ಹುಡುಗನೊಂದಿಗೆ ಪ್ರತಿಭಾಗೆ ಮದುವೆ ಆಗಿತ್ತು. ಇದರಿಂದ ಕೊಪಗೊಂಡು ಊರಿಗೆ ಬಂದಾಗ ಕೃತ್ಯ ಎಸಗಿದ್ದಾನೆಂದು ಮಾಹಿತಿ ತಿಳಿದುಬಂದಿದೆ.
ವಿವರಣೆಗೆ ಬರುವುದಾದರೆ ದೂದುದಾರೆ ಹುಚ್ಚಂಗೆಮ್ಮ ಸಣ್ಣವರ ಅವರ ಅಕ್ಕನ ಮಗಳಾದ ಮೃತ ಪ್ರತಿಭಾ ತನ್ನ ಕುಟುಂಬದೊಂದಿಗೆ ದುಗ್ಗಾವತಿ ಗ್ರಾಮದ ಹುಚ್ಚಂಗೆಮ್ಮ ಮನೆಗೆ ದುಗ್ಗಮ್ಮನ ಹಬ್ಬಕ್ಕೆಂದು ಬಂದಿದ್ದಳು. ಮಾ. 5ರಂದು ವಾಪಾಸ್ ತನ್ನ ಊರಿಗೆ ಹೋಗಬೇಕಾಗಿತ್ತು. ಹೋಗುವ ಮೊದಲು ಪದ್ಧತಿಯಂತೆ ಅದೇ ಗ್ರಾಮದಲ್ಲಿ ಬಳೆಹಾಕಿಸಿಕೊಂಡು ಬರಲು ಹೋಗಿ, ವಾಪಾಸ್ ಸಂಜೆ 4.45ಕ್ಕೆ ತನ್ನ ಮಗ ಅಭಿ ಮತ್ತು ಅಕ್ಕ ಹುಚ್ಚಂಗೆಮ್ಮ ಜೊತೆ ಮನೆ ಕೆಡೆಗೆ ಬರುವಾಗ ಅದೇ ದಾರಿಯಲ್ಲಿ ಹನುಮಂತಪ್ಪ ತನ್ನ ಮನೆಯ ಮುಂದೆ ನಿಂತಿದ್ದ. ಈ ವೇಳೆ ಏಕಾಏಕಿ ಚಾಕು ಹಿಡಿದುಕೊಂಡು ಬಂದು ಪ್ರತಿಭಾಳಿಗೆ ಹೊಟ್ಟೆಗೆ ಚುಚ್ಚಿ ನಂತರ ಕೆಳಗಡೆ ಕೆಡವಿ ಎದೆಯ ಎಡಭಾಗಕ್ಕೆ ಮತ್ತು ಎಡ ತೋಳಿನ ಬಳಿ ಚಾಕುವಿನಿಂದ ಚುಚ್ಚಿದ್ದಾನೆ. ಆಗ ಅಲ್ಲಿದ್ದವರು ಕೂಗಿಕೊಂಡಾಗ ಆರೋಪಿಯು ಓಡಿ ಹೋಗಿದ್ದಾನೆ.
ಗಾಯಗೊಂಡಿದ್ದ ಪ್ರತಿಭಾಳನ್ನು ಆಟೋದಲ್ಲಿ ಮೊದಲು ತೆಲಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹರಿಹರ ಸರ್ಕಾರಿ ಆಸ್ಪತ್ರೆಗೆ ಸಂಜೆ 6.30ಕ್ಕೆ ಸುಮಾರಿಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಪರೀಕ್ಷಿಸಿದಾಗ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ನಿನಗೋಸ್ಕರ ಯಾವ ಮಟ್ಟಕ್ಕಾದ್ರೂ ಹೋಗ್ತೀನಿ… I Love You ಜಾಕ್ವೆಲಿನ್ ಎಂದ ಮಹಾವಂಚಕ ಸುಕೇಶ್
ಆರೋಪಿ ಹನುಮಂತಪ್ಪ, ಪ್ರತಿಭಾಳ ಮದುವೆಯ ಪೂರ್ವದಲ್ಲಿ ಪ್ರೀತಿಸುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ. ಆದರೆ, ಪ್ರತಿಭಾಳಿಗೆ ಬೇರೆ ಕಡೆ ಮದುವೆ ಮಾಡಲಾಯಿತು. ನನ್ನನ್ನು ಬಿಟ್ಟು ಬೇರೆಯವರನ್ನು ಮದುವೆ ಮಾಡಿಕೊಂಡು ಅದು ಹೇಗೆ ಸುಖವಾಗಿರುತ್ತಾಳೆ ಎಂದು ಹೇಳಿದ್ದ. ಸಾಯಿಸುವ ಉದ್ದೇಶದಿಂದಲೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪ್ರತಿಭಾಳ ಅಕ್ಕ ದೂರು ದಾಖಲಿಸಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್)
ಮದ್ವೆಯ ಅಬ್ಬರದ ಸಂಗೀತದಿಂದ ಆದಷ್ಟು ದೂರವಿರಿ! ಸಂಶೋಧನೆಯಿಂದ ಬಯಲಾಗಿದೆ ಆಘಾತಕಾರಿ ಸಂಗತಿ
ಬಿರುಬೇಸಿಗೆ ಶುರು: ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ಏನು ಮಾಡ್ಬೇಕು? ಮಾಡಬಾರದು? ಇಲ್ಲಿದೆ ಉಪಯುಕ್ತ ಮಾಹಿತಿ