ಇಂಡಿ: ಸಮಾಜದ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣದಿಂದ ಸರ್ಕಾರ 16 ವರ್ಷಗಳವರೆಗೆ ಕಡ್ಡಾಯ ಉಚಿತ ಶಿಕ್ಷಣ ಘೋಷಿಸಿ ಶಿಕ್ಷಣ ನೀಡುತ್ತಿದೆ ಎಂದು ನ್ಯಾಯಾಧೀಶ ಈಶ್ವರ ಎಸ್.ಎಂ. ಹೇಳಿದರು.
ತಾಲೂಕಿನ ಅಂಜುಟಗಿಯಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕು ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಯೋಜನೆ ಮೂಲಕ ಅವರಿಗೂ ಶಿಕ್ಷಣ ನೀಡುವ ಕಾರ್ಯ ಮಾಡಿದೆ. ಪ್ರಕೃತಿ ವಿಕೋಪದಿಂದ ಅನಾಥರಾದ ಮಕ್ಕಳಿಗೆ ಮತ್ತು ಸಮಾಜದಲ್ಲಿ ನಡೆದ ಅಹಿತಕರ ಘಟನೆಗಳಲ್ಲಿ ಅನಾಥರಾದ ಮಕ್ಕಳಿಗೆ ಸರ್ಕಾರ ಅವರ ಶಿಕ್ಷಣ ಮತ್ತು ಬದುಕಿನ ಆಸರೆಗಾಗಿ ಮಕ್ಕಳ ವೀಕ್ಷಣಾಲಯಗಳನ್ನು ತೆರೆದು ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದೆ ಎಂದರು.
ವಕೀಲ ಜೆ.ಬಿ. ಬೇನೂರ ಮಾತನಾಡಿ, ಮಗು ತಾಯಿಯ ಗರ್ಭದಲ್ಲೇ ತಂದೆಯ ಆಸ್ತಿಯ ಹಕ್ಕನ್ನು ಹೊಂದಿರುತ್ತದೆ ಎಂದರು. ಹೆಚ್ಚುವರಿ ನ್ಯಾಯಾಧೀಶ ದೇವರಾಜು ಎಚ್.ಆರ್., ವಕೀಲರಾದ ಎಸ್.ಆರ್.ಬಿರಾದಾರ, ಎನ್.ಕೆ. ನಾಡಪುರೋಹಿತ ಇತರರಿದ್ದರು.