ಬೆಂಗಳೂರು: ಕರೊನಾ ಪಾಸಿಟಿವ್ ಪ್ರಕರಣಗಳ ಜತೆಗೆ ಸಾವಿನ ಪ್ರಕರಣವೂ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಎಲ್ಲರನ್ನೂ ಒಂದು ರೀತಿಯಲ್ಲಿ ಆತಂಕಕ್ಕೆ ಒಡ್ಡಿದೆ. ಮತ್ತೊಂದೆಡೆ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ ಎಂದು ಕೋವಿಡ್ ನಿರ್ವಹಣೆ ತಂಡದಲ್ಲಿರುವ ವ್ಯಕ್ತಿಯೊಬ್ಬರು ಗದ್ಗದಿತರಾಗಿ ಹೇಳಿಕೊಂಡಿದ್ದಾರೆ.
ಕೋವಿಡ್ ನಿರ್ವಹಣೆ ತಂಡದಲ್ಲಿರುವ ಅಮೀನ್ ಮುಸ್ತಾಫ ಎಂಬವರು ತಮ್ಮ ಅನಿಸಿಕೆ-ಅನುಭವವನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದು, ಅದೀಗ ಎಲ್ಲೆಡೆ ಹರಿದಾಡಲಾರಂಭಿಸಿದೆ. ಬೆಂಗಳೂರಿನ ಬಿಬಿಎಂಪಿ ಕೋವಿಡ್ ಕ್ವಿಕ್ ರೆಸ್ಪಾನ್ಸ್ ತಂಡದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಇವರು, ಸೋಂಕಿತರಿಗೆ ಹಾಸಿಗೆ-ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆ ಕೆಲಸ ಕಷ್ಟಕರವಾಗುತ್ತಿರುವುದರ ಕುರಿತು ಹೇಳಿಕೊಂಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಬೆಡ್-ಐಸಿಯು ವ್ಯವಸ್ಥೆ ಮಾಡುವುದೇ ಕಷ್ಟವಾಗಿದೆ. ಹಲವಾರು ಸಲ ಕರೆ ಮಾಡಿದರೂ ಹಾಸಿಗೆ ಸಿಗುತ್ತಿಲ್ಲ. ಕೆಲವೆಡೆ ಬೆಡ್ ಸಿಕ್ಕರೂ ಐಸಿಯು ಸಿಗುತ್ತಿಲ್ಲ. ಕೆಲವರು ಅಮ್ಮ ಸಾಯ್ತಿದಾರೆ, ಮಗ ಸಾಯ್ತಿದಾನೆ, ಒಂದೇ ಒಂದು ಬೆಡ್ ಕೊಡ್ಸಿ ಎಂದು ಬೇಡಿಕೊಂಡರೂ ಅದನ್ನು ಅರೇಂಜ್ ಮಾಡಲು ಆಗುತ್ತಿಲ್ಲ ಎಂದು ಪರಿಸ್ಥಿತಿಯ ಭೀಕರತೆಯನ್ನು ಅವರು ವಿವರಿಸಿದ್ದಾರೆ. ಎಲ್ಲರೂ ದಯವಿಟ್ಟು ನಿಮ್ಮ ನಿಮ್ಮ ಜಾಗ್ರತೆ ವಹಿಸಿ, ಮನೆಯಲ್ಲೇ ಇರಿ. ಹೊರಗೆ ಬರಲೇ ಬೇಕೆನಿಸಿದರೆ ನೂರು ಸಲ ಯೋಚಿಸಿ ಎಂದು ಅವರು ಕಿವಿಮಾತು ಹೇಳಿದ್ದಾರೆ. ಮಾತ್ರವಲ್ಲ, ಸರ್ಕಾರ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ, ಸೂಕ್ತ ವ್ಯವಸ್ಥೆ ಮಾಡಬೇಕು ಎಂದೂ ಅವರು ಬೇಡಿಕೊಂಡಿದ್ದಾರೆ.
ಗ್ರಾಹಕರ ದುಡ್ಡು ಗುಳುಂ- ಆನ್ಲೈನ್ ಬೆಟ್ಟಿಂಗ್ನಲ್ಲಿ ಎರಡು ಕೋಟಿ ಪಂಗನಾಮ ಹಾಕಿದ ನೌಕರ!