ಮೂಡಿಗೆರೆ: ಚಿನ್ನಿಗ ಮತ್ತು ಕಿರುಗುಂದ ಗ್ರಾಪಂ ವ್ಯಾಪ್ತಿಯಲ್ಲಿ ರೈತರ ಸಂಖ್ಯೆ ಹೆಚ್ಚಾಗಿದ್ದು, ಜನ್ನಾಪುರದಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಶುಕ್ರವಾರ ಜನ್ನಾಪುರ ವರ್ತಕರ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಕೃಷಿಕ ಎನ್.ಜೆ.ಭರತ್ ಮಾತನಾಡಿ, ಈಗಾಗಲೇ ಗೋಣಿಬೀಡಿನಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘವಿದೆ. ಗೋಣಿಬೀಡು, ಚಿನ್ನಿಗ, ಕಿರುಗುಂದ ಗ್ರಾಪಂ ವ್ಯಾಪ್ತಿಯ ರೈತರು ಈ ಸಹಕಾರ ಸಂಘದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಈಗ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದೊಂದು ಸಹಕಾರ ಸಂಘ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿರುವುದರಿಂದ ಜನ್ನಾಪುರದಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ಮಿಸಲು ರೈತರು ಮುಂದಾಗಿದ್ದಾರೆ. ಸರ್ಕಾರದ ಆದೇಶ ಪ್ರತಿ ಕೈ ಸೇರಿದ ಬಳಿಕ ಗೋಣಿಬೀಡು ಸಹಕಾರ ಸಂಘದ ಆಡಳಿತ ಮಂಡಳಿ ಗಮನಕ್ಕೆ ತಂದು ಒಪ್ಪಿಗೆ ಪಡೆದು ಜನ್ನಾಪುರದಲ್ಲಿ ಹೊಸದಾಗಿ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗೋಣಿಬೀಡು ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ವಿ.ಕೆ.ಶಿವೇಗೌಡ ಮಾತನಾಡಿ, ನಮ್ಮ ಸಂಸ್ಥೆಯಿಂದ ಹೊರಹೋಗಿ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ನಾವು ಹೇಳಿಲ್ಲ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಹಕಾರ ಸಂಘ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಈ ಅಕಾಶವನ್ನು ಎಲ್ಲಾ ಗ್ರಾಪಂ ವ್ಯಾಪ್ತಿಯ ರೈತರು ಬಳಸಿಕೊಳ್ಳಬಹುದು ಎಂದರು.
ನಮ್ಮ ಸಂಸ್ಥೆಯಿಂದ ಪಡೆದ ಕೆಸಿಸಿ ಸಾಲ, ವಾಹನ ಸಾಲ, ಆಭರಣ ಸಾಲ ಸೇರಿದಂತೆ ವಿವಿಧ ಸಾಲವನ್ನು ಮರುಪಾವತಿ ಮಾಡಿದ ಬಳಿಕ ಹೊರ ಹೋಗಿ ಹೊಸ ಸಂಸ್ಥೆಗೆ ಷೇರುದಾರರಾಗ ಬಹುದು. ಹೊಸ ಸಹಕಾರ ಸಂಘಕ್ಕೆ ಷೇರುದಾರರದ ಬಳಿಕ ನಮ್ಮ ಸಂಸ್ಥೆಯಲ್ಲಿ ಕೆಸಿಸಿ ಸಾಲ ಮರುಪಾವತಿ ಮಾಡದವರ ಬಗ್ಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಮೇಲಾಧಿಕಾರಿಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಗೋಣಿಬೀಡು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್.ಜೆ.ಜಯರಾಂ ಮಾತನಾಡಿ, ಹೊಸ ಸಂಸ್ಥೆ ಸ್ಥಾಪಿಸಲು ನಮ್ಮ ಸಹಕಾರ ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಸಿ.ಆರ್.ನೇಮರಾಜ್, ಸುನಿಲ್ ಕುಮಾರ್ ನಿಡಗೊಡು, ಯು.ಎನ್.ಚಂದ್ರೇಗೌಡ, ಯು.ಎಚ್.ಹೇಮಶೇಖರ್ ಜೆ.ಎಸ್.ರಘು, ಎ.ಜಿ.ಸುಬ್ರಾಯಗೌಡ, ಸುಧಾಕರ, ಯು.ಎಚ್.ರಾಜಶೇಖರ್ ಇತರರಿದ್ದರು.