ಕೊಪ್ಪಳ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತಾಗಿ ಶಾಸಕ ಬಸವರಾಜ್ ಯತ್ನಾಳ್ ನೀಡಿದ್ದ ಹೇಳಿಕೆಯನ್ನು ಸಚಿವ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಅವರು, “ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚೆಗೆ ಅವರು ನೇರವಾಗಿ ಕಾಂಗ್ರೆಸ್ಗೆ ಬೆಂಬಲಿಸುತ್ತಿದ್ದಾರೆ. ದಯಮಾಡಿ ಒಂದು ಪಕ್ಷದ ಪರ ಮುಖವಾಡ ಹಾಕಬೇಡಿ ಎಂದು ದೊರೆಸ್ವಾಮಿ ಅವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.” ಎಂದು ಹೇಳಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಾವೇ ಅಂಬೇಡ್ಕರ್, ತಾವೇ ಸಂವಿಧಾನ ಬರೆದಿರೋದು ಎನ್ನುವ ರೀತಿಯಲ್ಲಿ ಆಡುತ್ತಾರೆ. ಕಾಂಗ್ರೆಸ್ನವರು ಅಧಿವೇಶನ ನಡೆಯುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ. ಹಾಗಾದರೆ ಅಧಿವೇಶನ ನಡೆಯುವುದಕ್ಕೆ ಬಿಡುವುದಿಲ್ಲ ಎನ್ನುವವರಿಗೆ ರಮೇಶ್ ಕುಮಾರ್ ಏನು ಮಾಡುತ್ತಾರೆ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೊಲೆಗಡುಕ ಎಂದಿದ್ದ ಸಿದ್ದರಾಮಯ್ಯನವರನ್ನು ಯಾಕೆ ಉಚ್ಚಾಟನೆ ಮಾಡಲಿಲ್ಲ? ಎಂದು ಕೇಳಿದ್ದಾರೆ.
ರೈತರ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಕ್ಕೆ ಉತ್ತರಿಸಿರುವ ಅವರು, ರೈತ ನಾಯಕ ಅಂತ ಎಚ್ಡಿಕೆ ಫೋಸ್ ಕೊಡುತ್ತಾರೆ. ಆದರೆ ಅವರ ಬಳಿ ಚುನಾವಣೆಯಲ್ಲಿ ಅವರ ಅಪ್ಪ ಮತ್ತು ಮಗನನ್ನು ಗೆಲ್ಲಿಸಿಕೊಳ್ಳೋದಕ್ಕೆ ಆಗಲಿಲ್ಲ. ರೈತರ ಪರ ಮಾತನಾಡುವುದಕ್ಕೆ ನಿಮಗೇನು ನೈತಿಕ ಹಕ್ಕಿದೆ? ಬಜೆಟ್ ನೋಡಿ, ಆಮೇಲೆ ಬಿಜೆಪಿ ಏನು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ನುಡಿದಿದ್ದಾರೆ. (ದಿಗ್ವಿಜಯ ನ್ಯೂಸ್)