ಮಂಗಳೂರು: ಮೈಕ್ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಮೈಕ್ ಇಲ್ಲದೆ ಕೂಗಿದರೆ ಆಜಾನ್ ಕೇಳುವುದಿಲ್ಲವೇ? ಅಲ್ಲಾನೇನು ಕಿವುಡನೇ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದದ ಕಿಡಿ ಹೊತ್ತಿಸಿದ್ದರು. ಈ ಸಂಬಂಧ ಪತ್ರಕರ್ತರು ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಮ್ಮ ಹೇಳಿಕೆಗೆ ಸಮರ್ಥನೆ ಮಾಡಿದ್ದಾರೆ.
ನಿಮಗೆ ಅಭಿವೃದ್ಧಿ ವಿಚಾರ ಬೇಕಾಗಿಲ್ಲ. ಜನರನ್ನು ಪ್ರಚೋದನೆ ಮಾಡುತ್ತಾ, ಸಮಾಜದಲ್ಲಿ ಸೌಹಾರ್ದ ಕೆಡಿಸುವ ಕೆಲಸ ಮಾಡುತ್ತೀರಿ ಎಂದು ಪತ್ರಕರ್ತರಿಂದ ಪ್ರಶ್ನೆ ಎದುರಾಗುತ್ತಿದ್ದಂತೆ, ಸುಪ್ರೀಂಕೋರ್ಟ್ ಆದೇಶವಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.
ಇದನ್ನೂ ಓದಿ: ದಶಪಥ ಹೆದ್ದಾರಿ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಬೇಕೆಂಬ ಕನಿಷ್ಟ ಸೌಜನ್ಯವೂ ಇಲ್ಲ; ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ.ಸುರೇಶ್
ಪರೀಕ್ಷೆ ಸಮಯದಲ್ಲಿ ಆಜಾನ್ ಕೂಗುವುದರಿಂದ ಮಕ್ಕಳಿಗೆ ತೊಂದರೆಯಾಗುವುದಿಲ್ಲವೇ? ದಿನಾ ಬೆಳಗ್ಗೆ, ರಾತ್ರಿ ಎನ್ನದೆ ಆಜಾನ್ ಕೂಗುತ್ತಾರೆ, ಇದೆಲ್ಲ ನಿಲ್ಲಬೇಕು. ನನಗೆ ಭಾಷಣ ಮಾಡುತ್ತಿದ್ದಾಗ ಆಜಾನ್ ಕೇಳಿ ತಲೆನೋವು ಬಂತು, ಹೀಗಾಗಿ ನಾನು ಕೆಲ ಮಾತುಗಳನ್ನು ಹೇಳಿದೆ ಎಂದು ವಿವಾದದ ಸ್ವರೂಪ ಪಡೆದುಕೊಂಡಿರುವ ಮಾತುಗಳಿಗೆ ಸ್ಪಷ್ಟನೆ ನೀಡಿದರು.
ಮುಸ್ಲಿಮರ ಓಟು ಬೇಡ ಎನ್ನುವುದಿಲ್ಲ, ರಾಷ್ಟ್ರೀಯವಾದಿ ಮುಸ್ಲಿಮರು ಮತ ಹಾಕುತ್ತಾರೆ. ನನ್ನ ಕ್ಷೇತ್ರದಲ್ಲಿ ಮುಸ್ಲಿಮರ ವಾರ್ಡಿನಲ್ಲಿ ನನಗೆ ಮತ ಬೀಳುವುದಿಲ್ಲ. ಆದರೆ ಅವರಿಗೆ ಸವಲತ್ತು ಕೊಡಿಸುತ್ತೇನೆ. ಶಾಸಕನಾಗಿ ಎಲ್ಲರ ಪ್ರತಿನಿಧಿ ಆಗಿರುತ್ತೇನೆ. ಮುಸ್ಲಿಮರು ಮೋದಿ ಕೆಲಸ ನೋಡಿ ಮತ ಹಾಕುತ್ತಾರೆ ಎಂದು ಈಶ್ವರಪ್ಪ ಹೇಳಿದರು.