ಕೊಪ್ಪಳ: ಸೇವೆ ಕಾಯಂ, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸುವಂತೆ ಒತ್ತಾಯಿಸಿ ಕಿಮ್ಸ್ ಗುತ್ತಿಗೆ ನೌಕರರು ಮಂಗಳವಾರ ನಗರದ ಜಿಲ್ಲಾಸ್ಪತ್ರೆ ಮುಂದೆ ಧರಣಿ ನಡೆಸಿದರು.
ಕಿಮ್ಸ್ನಲ್ಲಿ 124 ನೌಕರರು 2014-15ರಿಂದ ಕೆಲಸ ಮಾಡುತ್ತಿದ್ದೇವೆ. ಈವರೆಗೆ ಸಮಾನ ವೇತನ, ಸೇವೆ ಕಾಯಂಗೊಳಿಸಿಲ್ಲ. ಪಿಎಫ್, ಇಎಸ್ಐ ಸೌಲಭ್ಯ ನೀಡುತ್ತಿಲ್ಲ. ವೈದ್ಯಕೀಯ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ವಿಲೇವಾರಿ, ಎಲೆಕ್ಟ್ರಿಷಿಯನ್, ಪ್ಲಂಬರ್, ಆಫೀಸ್ ಬಾಯ್, ಸ್ವೀಪರ್, ಡಾಟಾ ಎಂಟ್ರಿ ಆಪರೇಟರ್, ಆಕ್ಸಿಜನ್ ಸಹಾಯಕರು ಹಾಗೂ ಇತರ ವೈದ್ಯಕೀಯೇತರ ಕೆಲಸಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಸಮಯದಲ್ಲೂ ಕೆಲಸ ಮಾಡಿದ್ದು, ಯಾವುದೇ ಭದ್ರತೆ ಕಲ್ಪಿಸಿಲ್ಲ. ಬದಲಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ಕೂಡಲೇ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಇಎಸ್ಐ, ಪಿಎಫ್ ಸೌಲಭ್ಯ ಕಲ್ಪಿಸಬೇಕು. ಸೇವೆ ಕಾಯಂಗೊಳಿಸಬೇಕು. ಕೋವಿಡ್ 19 ಸಂಕಷ್ಟ ಭತ್ಯೆ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ಕೆ.ಬಿ.ಗೋನಾಳ, ಡಿ.ಎಚ್.ಪೂಜಾರ್, ಬಸವರಾಜ ನರೇಗಲ್, ಮೂಕಪ್ಪ ಮೇಸ್ತ್ರಿ, ರತ್ನಮ್ಮ ಪುರಾಣಿಕಮಠ, ಪದ್ಮಾವತಿ ದಸ್ತೇನವರ್, ಬಸಮ್ಮ ದೊಡ್ಮನಿ, ಯಲ್ಲಪ್ಪ ಆಡಿನ್, ರಮೇಶ್, ಬಸವರಾಜ, ಮಂಜುನಾಥ ಇತರರಿದ್ದರು.