ಸವಣೂರ: ಕರೊನಾ ಮಹಾಮಾರಿಯಿಂದಾಗಿ ಕೆಲಸ ಕಳೆದುಕೊಂಡ ಯುವ ಇಂಜಿನಿಯರ್ ಒಬ್ಬ ಮಾನಸಿಕವಾಗಿ ನೊಂದು ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರಿನಲ್ಲಿ ಇಂಜನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಳ್ಳಾರಿ ಜಿಲ್ಲೆಯ ಕೊಳಗಲ್ಲ ಗ್ರಾಮದ ನಿವಾಸಿ ಜಡಿಯಪ್ಪ ಕರಬಸಪ್ಪ ಕಾರಪುಡಿ (25) ಮೃತ ಯುವಕ. ಹಾವೇರಿ ಹತ್ತಿರದ ವರದಾ ನದಿಗೆ ನಿರ್ವಿುಸಿರುವ ಬ್ರಿಜ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಮಂಟಗಣಿ ಗ್ರಾಮದ ಹತ್ತಿರದ ವರದಾ ನದಿಯ ದಂಡೆಯಲ್ಲಿ ಶುಕ್ರವಾರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಪಿಎಸ್ಐ ಶಶಿಧರ ಜಿ.ಎಂ., ಎಎಸ್ಐ ಮೇಘರಾಜ ದೊಡ್ಡಮನಿ, ಆರ್ಐ ನಾಗರಾಜ ಸೂರ್ಯವಂಶಿ ಇತರರು ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂಜನಿಯರ್ ಆಗಿದ್ದ ಜಡಿಯಪ್ಪ ಕಾರಪುಡಿ ಕರೊನಾದಿಂದಾಗಿ ಕೆಲಸ ಕಳೆದುಕೊಂಡು ಸ್ವಂತ ಗ್ರಾಮಕ್ಕೆ ಹಿಂದಿರುಗಿದ್ದರು. ಇತ್ತೀಚೆಗೆ ಹಾವೇರಿಯಲ್ಲಿರುವ ಸಹೋದರನ ಮನೆಗೆ ಬಂದಿದ್ದರು. ಅ. 14ರಂದು ದಾಖಲಾತಿಗಳನ್ನು ಜರಾಕ್ಸ್ ಮಾಡಿಸಿಕೊಂಡು ಬರುವದಾಗಿ ಹಾವೇರಿಗೆ ತೆರಳಿದ್ದ ಜಡಿಯಪ್ಪ, ಶುಕ್ರವಾರ ಮಂಟಗಣಿ ಹತ್ತಿರದ ವರದಾ ನದಿಯ ದಂಡೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೆಲಸ ಇಲ್ಲದ ಕಾರಣ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.