ಅರಸೀಕೆರೆ: ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟುಕೊಳ್ಳುವ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಸಲಹೆ ನೀಡಿದರು.
ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ಸ್ವಚ್ಛಭಾರತ್ ಆಂದೋಲನ ನಿಮಿತ್ತ ಆಯೋಜಿಸಿದ್ದ ಚಟುವಟಿಕೆಯಲ್ಲಿ ಪಾಲ್ಗೊಂಡು ಕಂದಾಯ ಇಲಾಖೆ ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿತ್ಯ ಜೀವನಕ್ಕೆ ಆಹಾರ, ಗಾಳಿ, ಮುಖ್ಯ ಎಂದು ಭಾವಿಸಲಾಗಿದ್ದು, ಶುಚಿತ್ವಕ್ಕೂ ಒತ್ತು ನೀಡುವ ಅಗತ್ಯವಿದೆ ಎಂದರು.
ಗಾಂಧೀಜಿ ಕೂಡ ಸಮುದಾಯದ ಆರೋಗ್ಯ ಕಾಪಾಡಲು ಇಂತಹ ಐತಿಹಾಸಿಕ ಆಂದೋಲನ ನಡೆಸಿದ್ದರು. ಕೇಂದ್ರ ಸರ್ಕಾರದ ನಿರ್ದೇಶನದಂತೆ ಗಾಂಧಿ ಜಯಂತಿ ಆಚರಣೆಗೂ ಮುನ್ನ ಎಲ್ಲರೂ ಸ್ವಚ್ಛ ಭಾರತ್ ಅಭಿಯಾನದಂತಹ ಮಹತ್ವದ ಕಾರ್ಯದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ಉಪತಹಸೀಲ್ದಾರ್ ಫಾಲಾಕ್ಷ, ಕಂದಾಯ ಅಧಿಕರಿಗಳಾದ ಸೋಮಶೇಖರ್, ಶಿವಶಂಕರ್,ಮಂಜುನಾಥ್,ಲೋಕೇಶ್, ಮಂಜು ಸೇರಿದಂತೆ ಹಲವರು ಹಾಜರಿದ್ದರು.