ಚೆನ್ನೈ: ನಿನ್ನೆ (ಮೇ 01) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಎಂ.ಎಸ್. ಧೋನಿ ಅವರ ನಡೆ ಟೀಕೆಗೆ ಗುರಿಯಾಗಿದೆ. ಕೊನೆಯ ಓವರ್ನಲ್ಲಿ ಸ್ಫೋಟಕ ಆಟಗಾರ ಡರೈಲ್ ಮಿಚೆಲ್ಗೆ ಕ್ರೀಸ್ ಕೊಡದೆ ವಾಪಸ್ ನಾನ್ ಸ್ಟ್ರೈಕರ್ ವಿಭಾಗಕ್ಕೆ ಕಳುಹಿಸಿದ್ದು, ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಧೋನಿ ನಡೆಯನ್ನು ಖಂಡಿಸಿದ್ದಾರೆ.
ಸ್ಟಾರ್ ಸ್ಫೋರ್ಟ್ಸ್ ಮಾತನಾಡಿರುವ ಇರ್ಫಾನ್, ಎಂ.ಎಸ್. ಧೋನಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿರುವುದರಿಂದ ನೀವು ಖಂಡಿತವಾಗಿಯೂ ಸಿಕ್ಸರ್ ಬಗ್ಗೆ ಮಾತನಾಡುತ್ತೀರಿ. ಜನರು ಅವರನ್ನು ತುಂಬಾ ಪ್ರೀತಿಸುತ್ತಾರೆ. ಆದಾಗ್ಯೂ, ಅವರು ಆಡಿದ ರೀತಿಗಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ. ಧೋನಿ ಅವರು ಹಾಗೆ ಮಾಡಬಾರದಿತ್ತು. ಇದೊಂದು ಟೀಮ್ ಗೇಮ್. ಟೀಮ್ ಗೇಮ್ನಲ್ಲಿ ಹಾಗೆ ಮಾಡಬೇಡಿ. ಇನ್ನೊಬ್ಬ ವ್ಯಕ್ತಿ ಕೂಡ ಅಂತಾರಾರಾಷ್ಟ್ರೀಯ ಆಟಗಾರ. ಅವನು ಬೌಲರ್ ಆಗಿದ್ದರೆ, ನನಗೆ ಅರ್ಥವಾಗುತ್ತಿತ್ತು. ಆದರೆ, ನೀವು ಅದನ್ನು ಮಾಡುವ ಅಗತ್ಯವಿರಲಿಲ್ಲ ಮತ್ತು ಅದನ್ನು ತಪ್ಪಿಸಬಹುದಿತ್ತು ಎನ್ನುವ ಮೂಲಕ ಡರೈಲ್ ಮಿಚೆಲ್ಗೆ ಕ್ರೀಸ್ ಬಿಟ್ಟುಕೊಡಲು ನಿರಾಕರಿಸಿದ ಧೋನಿ ನಡೆಯನ್ನು ಇರ್ಫಾನ್ ಖಂಡಿಸಿದರು.
ನಡೆದಿದ್ದೇನು?
ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಚೆನ್ನೈ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಚೆನ್ನೈ ನೀಡಿದ್ದ 163 ರನ್ಗಳ ಗುರಿಯನ್ನು 17.5 ಓವರ್ಗಳಲ್ಲೇ ಪಂಜಾಬ್ ಮುಟ್ಟಿತು. ಇದರೊಂದಿಗೆ 10 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಪಂಜಾಬ್ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ಇನ್ನಿಂಗ್ಸ್ ವೇಳೆ ಕೊನೆಯ ಓವರ್ ಬೌಲಿಂಗ್ ಮಾಡಲು ಅರ್ಷದೀಪ್ ಸಿಂಗ್ ಬಂದಿದ್ದರು. ಈ ವೇಳೆ ಕ್ರೀಸ್ನಲ್ಲಿ ಧೋನಿ-ಡರೈಲ್ ಮಿಚೆಲ್ ಇದ್ದರು. ಧೋನಿ ಸ್ಟ್ರೈಕರ್ ವಿಭಾಗದಲ್ಲಿದ್ದರೆ, ಸಹಜವಾಗಿ ಬೌಲರ್ಗಳ ಮೇಲೆ ಸ್ವಲ್ಪ ಒತ್ತಡವಿರುತ್ತದೆ. ಹೀಗಾಗಿಯೇ ಅರ್ಷದೀಪ್ ಮೊದಲ ಎಸೆತವನ್ನು ವೈಡ್ ಎಸೆದರು. ನಂತರದ ಎಸೆತವನ್ನು ಧೋನಿ ಬೌಂಡರಿ ಬಾರಿಸಿದರು. ಆ ಬಳಿಕ ಅರ್ಷದೀಪ್ ಮತ್ತೊಂದು ವೈಡ್ ಬೌಲ್ ಮಾಡಿದರು. ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಆದರೆ, ಶಾಟ್ ಸರಿಯಾಗಿ ಕನೆಕ್ಟ್ ಆಗಲಿಲ್ಲ. ಚೆಂಡು ಗಾಳಿಯಲ್ಲಿ ಹಾರಿತು. ಈ ವೇಳೆ ನಾನ್ ಸ್ಟ್ರೈಕರ್ ವಿಭಾಗದಲ್ಲಿ ಡರೈಲ್ ಮಿಚೆಲ್ ರನ್ಗಾಗಿ ಓಡಿದರು. ಆದರೆ ಧೋನಿ ಅವರನ್ನು ಹಿಂದಕ್ಕೆ ಹೋಗುವಂತೆ ಹೇಳಿದರು. ಆದರೆ ಅದಾಗಲೇ ಡರೈಲ್ ಮಿಚೆಲ್, ಧೋನಿ ಇದ್ದ ಕ್ರೀಸ್ಗೆ ಹೋಗಿದ್ದರು ಮತ್ತು ವಾಪಸ್ ಬಂದರು. ಅಷ್ಟರಲ್ಲಿ ಫೀಲ್ಡರ್ ಚೆಂಡನ್ನು ಎಸೆದರು. ಆದರೆ ಚೆಂಡು ವಿಕೆಟ್ಗೆ ತಾಗದ ಕಾರಣ ಮಿಚೆಲ್ ರನ್ ಔಟ್ನಿಂದ ಪಾರಾದರು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತವನ್ನು ಧೋನಿ ಸಿಕ್ಸರ್ಗೆ ಬಾರಿಸಿದರು. ಈ ಪಂದ್ಯದಲ್ಲಿ ಧೋನಿ 11 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 14 ರನ್ ಗಳಿಸಿರು.
ಫ್ಯಾನ್ಸ್ ಅಸಮಾಧಾನ
ಮಿಚೆಲ್ಗೆ ಸ್ಟ್ರೈಕ್ ನೀಡದಿದ್ದಕ್ಕೆ ಧೋನಿ ಮೇಲೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಸಹ ಕೋಪಗೊಂಡಿದ್ದಾರೆ. ಮಿಚೆಲ್ ಕೂಡ ಓರ್ವ ಉತ್ತಮ ಬ್ಯಾಟರ್ ಅಲ್ಲವೇ? ಅವರಿಗೂ ಸ್ಟ್ರೈಕ್ ಕೊಡಬೇಕಿತ್ತು. ಮಿಚೆಲ್ ಏನು ಬೌಲರ್ ಅಲ್ಲ, ಅವರು ಕೂಡ ಅದ್ಭುತ ಬ್ಯಾಟರ್ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಧೋನಿ ಅವರ ನಡೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್)
ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್
ಧೋನಿ ಇಷ್ಟೊಂದು ಸ್ವಾರ್ಥಿಯಾದ್ರಾ? ಅವಮಾನ ಮಾಡಬಾರದಿತ್ತು, ಮಾಹಿ ವಿರುದ್ಧ ಫ್ಯಾನ್ಸ್ ಟೀಕೆ