ಜಯಪುರ: ಮೇಗುಂದಾ ಹೋಬಳಿ ಹೇರೂರು ಗ್ರಾಮ ಪಂಚಾಯಿತಿ ಎಲೆಮಡಿಲು ಬಳಿಯ ಬಾಲನೂರ್ ಟೀ ಪ್ಲಾಂಟೇಷನ್ನಲ್ಲಿ ಹಾವೇರಿ ಟಸ್ಕರ್ ಕಾಡಾನೆ ಸೆರೆ ಹಿಡಿಯುವ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಒಂದು ವಾರ ಕಳೆದಿದ್ದು, ಅರಣ್ಯ ಇಲಾಖೆಯ ಹನಿ ಟ್ರ್ಯಾಪ್ಗೆ ಬೀಳದ ಹಾವೇರಿ ಟಸ್ಕರ್, ಹೆಣ್ಣಾನೆಯೊಂದಿಗೆ ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಅಡುಗುತಾಣ ಎಲೆಮಡಿಲು ಗುಡ್ಡ ಸೇರಿದೆ.
ಟೀ ಎಸ್ಟೇಟ್ನ ಮುತ್ತುಮಾರಿಯಮ್ಮ ದೇವಾಲಯದ ಬಳಿ ಹೆಣ್ಣಾನೆ ಭಾನುಮತಿಯನ್ನು ಭಾನುವಾರ ರಾತ್ರಿಯೇ ಬಿಡಲಾಗಿತ್ತು. ಭಾನುವಾರ ರಾತ್ರಿ ಬಂದ ಕಾಡಾನೆ ಹಾವೇರಿ ಟಸ್ಕರ್ ಬೆಳಗ್ಗೆ 7.30ರ ವರೆಗೆ ಭಾನುಮತಿಯೊಂದಿಗೆ ಕಾಲ ಕಳೆದಿತ್ತು. ಸಮೀಪದಲ್ಲಿದ್ದ ಕೂಲಿ ಲೈನಿನಿಂದ ಟೀ ಎಸ್ಟೇಟ್ ಕೆಲಸಕ್ಕೆ ಹೊರಟ ಹೊರ ರಾಜ್ಯದ ಕೂಲಿಕಾರ್ವಿುಕರು ಕೂಗಿ ಕೊಂಡಾಗ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಸೋಮವಾರ ರಾತ್ರಿ ಮತ್ತೆ ಭಾನುಮತಿಯನ್ನು ದೇವಸ್ಥಾನದ ಬಳಿ ಇರಿಸಲಾಯಿತಾದರೂ ಕಾಡಾನೆ ಹಾವೇರಿ ಟಸ್ಕರ್ ಭಾನುಮತಿ ಹೆಣ್ಣಾನೆಯ ಬಳಿ ಬಾರದೆ ದೂರದಿಂದಲೇ ಗಮನಿಸಿ ವಾಪಸ್ ತೆರಳಿದೆ ಎಂದು ತಿಳಿದುಬಂದಿದೆ.
ಡಿಎಫ್ಒ ನೀಲೇಶ್ ಶಿಂದೆ, ಎಸಿಎಫ್ ಮಂಜುನಾಥ್, ಸಿಸಿಎಫ್ ಸಿದ್ರಾಮಪ್ಪ ಮಂಗಳವಾರ ಕಾಡಾನೆ ಸೆರೆಗೆ ಹೊಸ ಯೋಜನೆ ರೂಪಿಸಿದ್ದು, ಅದರಂತೆ ಬೇರೊಂದು ಸ್ಥಳದಲ್ಲಿ ಭಾನುಮತಿಯನ್ನು ಬಿಡಲಾಗಿದ್ದು ಹಾವೇರಿ ಟಸ್ಕರ್ನನ್ನು ಹನಿಟ್ರ್ಯಾಪ್ಗೆ ಬೀಳಿಸಲು ಕಾದಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿ ಆನೆ ಸೆರೆಗೆ ಸರಿಯಾದ ಯೋಜನೆ ರೂಪಿಸಿ ಆದಷ್ಟು ಬೇಗ ಕಾಡನೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹೆಣ್ಣಾನೆ ಕಟ್ಟಿರುವ ಪ್ರದೇಶದಿಂದ 900 ಮೀಟರ್ ದೂರದಲ್ಲಿ ಕಾಡಾನೆಯ ಜಿಪಿಎಸ್ ಲೊಕೇಷನ್ ಕಾಣಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆ ಸೆರೆಗೆ ಪರಿಣಿತರ ಸಹಾಯ ಪಡೆದು ಸೂಕ್ತಯೋಜನೆ ರೂಪಿಸುವಂತೆ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ.