ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ಸ್ವಂತಕ್ಕಾಗಿ ಅಥವಾ ಕುಟುಂಬಕ್ಕಾಗಿ ಆಸ್ತಿಯನ್ನು ಮಾಡಿಕೊಂಡಿಲ್ಲ. ಸದಾ ಜನರ ಬಗ್ಗೆ ಯೋಚನೆ ಮಾಡಿದವರು. ಅಂತಹ ನಿಸ್ವಾರ್ಥ ಸೇವೆ ಮಾಡಿರುವ ಕೆ.ವಿ.ಶಂಕರಗೌಡರ ಕುಟುಂಬದ ಕುಡಿ ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸ್ವಾಭಿಮಾನಿ ಪಡೆ ಸದಸ್ಯ ಬಿ.ಲೋಕೇಶ್ ತಿಳಿಸಿದರು.
ನಗರದ 20ನೇ ವಾರ್ಡ್ ಹೊಸಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಪರ ಮತಯಾಚನೆ ಮಾಡಿದ ಅವರು, ಇದು ಮಂಡ್ಯ ಕ್ಷೇತ್ರದ ಸ್ವಾಭಿಮಾನದ ಚುನಾವಣೆ. ವಿಜಯಾನಂದ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಯತ್ನ ಪಟ್ಟಿದ್ದರು. ಆದರೆ ದಳದ ವರಿಷ್ಠರು ಮಂಡ್ಯ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿ ಇದ್ದರೂ ಮೇಲುಕೋಟೆ ಕ್ಷೇತ್ರದ ವ್ಯಕ್ತಿಗೆ ಅವಕಾಶ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೆವಿಎಸ್ ಕುಟುಂಬದ ಕುಡಿ ವಿಜಯಾನಂದ ಅವರನ್ನು ಗೆಲ್ಲಿಸುವ ಮೂಲಕ ಮಂಡ್ಯದ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದರು.
ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮಾತನಾಡಿ, ಜನರ ಪ್ರೀತಿ ವಿಶ್ವಾಸದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನಿ ಪಡೆಯಿಂದ ನಾನು ಸ್ಪರ್ಧೆ ಮಾಡಿದ್ದೇನೆ. ತಮ್ಮ ಅಮೂಲ್ಯವಾದ ಮತ ನೀಡಿ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ಶಾಸಕ ಎಂ.ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಬೋರೇಗೌಡ, ಮುಖಂಡರಾದ ಮಹಾಲಿಂಗೇಗೌಡ ಮುದ್ದನಘಟ್ಟ, ಕುಮಾರ್, ಜಯಕುಮಾರ್, ನಿಂಗಣ್ಣ, ಪುಟ್ಟಸ್ವಾಮಿ, ಶಿವರಾಮು ಇತರರಿದ್ದರು.