ಮಂಡ್ಯ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಕಾರ್ಯ ನಡೆಯಿತು. ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್ ಮತಯಂತ್ರಗಳ ಭದ್ರತಾ ಕೊಠಡಿಗೆ ಭೇಟಿ ನೀಡಿ ಕೆಲಸಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಎಫ್ಎಲ್ಸಿ (ಫಸ್ಟ್ ಲೆವೆಲ್ ಚೆಕ್ಕಿಂಗ್) ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್ಗಳು ಮಂಡ್ಯ ಜಿಲ್ಲೆಗೆ ನೀಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು.
6 ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ರಾಜಕೀಯ ಪಕ್ಷಗಳ ಮುಖಂಡರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. 96 ವೋಟ್ನ್ನು ಪೋಲ್ ಮಾಡಿ ವಿದ್ಯುನ್ಮಾನ ಮತ ಯಂತ್ರಗಳನ್ನು ಪರಿಶೀಲನೆ ಮಾಡುತ್ತಿದೇವೆ. ಹೈದರಾಬಾದ್ನಿಂದ 24 ತಜ್ಞರ ತಂಡ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಪರಿಶೀಲನಾ ಕಾರ್ಯಕ್ಕೆ ನಿಯೋಜನೆಗೊಂಡು ಪರಿಶೀಲಿಸುತ್ತಿದ್ದಾರೆ. 22 ಟೇಬಲ್ ಗಳಲ್ಲಿ ದಿನಕ್ಕೆ 350 ಇವಿಎಂ ಮಿಷನ್ ಅನ್ನು ಪರಿಶೀಲನೆ ಮಾಡುತ್ತೇವೆ. ನಂತರ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಭಾರತದ ಚುನಾವಣಾ ಆಯೋಗದಿಂದ 2023ರ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಉದ್ದೇಶಕ್ಕಾಗಿ 2,359 ಕಂಟ್ರೋಲ್ ಯೂನಿಟ್, 3,359 ಬ್ಯಾಲೆಟ್ ಯೂನಿಟ್, ಮತ್ತೆ ವಿವಿ ಪ್ಯಾಟ್ಗಳನ್ನ ನೀಡಲಾಗಿದೆ. ಪ್ರತಿ ವಿದ್ಯುನ್ಮಾನ ಮತಯಂತ್ರಕ್ಕೆ 96 ವೋಟ್ಗಳನ್ನು ಚಲಾಯಿಸಿ ಎಫ್ಎಲ್ಸಿ ಮಾಡಲಾಗುವುದು. ಜಿಲ್ಲೆಗೆ ಬಂದಿರುವ ಎಲ್ಲ ಎಲೆಕ್ಟ್ರಾನಿಕ್ ವೊಟಿಂಗ್ ಯಂತ್ರಗಳ ಸಾಮರ್ಥ್ಯ ಪರಿಶೀಲನೆ ಮಾಡುತ್ತಿದ್ದೇವೆ ಎಂದರು.
ಮಂಡ್ಯ ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ, ತಹಸೀಲ್ದಾರ್ ಕುಂಞ ಅಹಮದ್ ಇದ್ದರು.