ಬೆಂಗಳೂರು: ಮಾರ್ಚ್ನಲ್ಲೇ ಆರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕೋವಿಡ್-19 ಹಿನ್ನೆಲೆ ಮುಂದೂಡಲಾಗಿದೆ. ಲಾಕ್ಡೌನ್, ಕರೊನಾ ಭೀತಿ ಹಿನ್ನೆಲೆ ಶಿಕ್ಷಕರು-ವಿದ್ಯಾರ್ಥಿಗಳ ಮುಖಾಮುಖಿ ಭೇಟಿಯೂ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಕಾರ್ಯಕ್ಕೆ ಸ್ವತಃ ಶಿಕ್ಷಣ ಸಚಿವರೇ ಮನಸೋತಿದ್ದಾರೆ. ಈ ನಿಟ್ಟಿನಲ್ಲಿ ದತ್ತ ಮೇಷ್ಟ್ರುಗೆ ಸಚಿವ ಸುರೇಶ್ ಕುಮಾರ್ ಖುದ್ದು ಪತ್ರ ಬರೆದಿದ್ದು, ಅದರಲ್ಲೇನಿದೆ ಗೊತ್ತಾ?
ಇದನ್ನೂ ಓದಿ ನಗರ ನಕ್ಸಲರು ಮತ್ತು ಜಿಹಾದಿಗಳ ಹಿಂದೆ ಹೋದ ಹಿಂದೂ ಯುವತಿಯ ದುರಂತ ಕಥೆ ಇದು…
“ಆತ್ಮೀಯರಾದ ವೈ.ಎಸ್.ವಿ. ದತ್ತಾ ಅವರೇ, ಕಳೆದ ತಿಂಗಳು ಒಂದು ಸಂಜೆ ಲಾಕ್ಡೌನ್ ಹೇಗಿದೆ? ಎಂದು ನೋಡಲು ವಿಧಾನಸೌಧದ ನನ್ನ ಕಚೇರಿಯಿಂದ ರಾಜಾಜಿನಗರ ಕ್ಷೇತ್ರ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿದ್ದೆ. ಆ ವೇಳೆ ಆನಂದರಾವ್ ಸರ್ಕಲ್ ಬಳಿ ಕಾರಿನಿಂದ ಬಂದಿಳಿದ ನಿಮ್ಮನ್ನು ಭೇಟಿ ಆದೆ. ಆ ಸಂದರ್ಭದಲ್ಲಿ ಮಕ್ಕಳ ಕಲಿಕಾ ಸಮಸ್ಯೆ ಕುರಿತು ಚರ್ಚೆಸಿದ್ದೆವು.
ಶಿಕ್ಷಣದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನೀವು ಈ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ತುಡಿಯುವ ನಿಮ್ಮ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು. ಈಗಲೂ ಯೂ-ಟ್ಯೂಬ್ ಮೂಲಕ ಎಸ್ಎಸ್ಎಲ್ಸಿ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ಮಾಡುತ್ತ ಮತ್ತೊಮ್ಮೆ ‘ದತ್ತ ಮೇಷ್ಟ್ರು’ ಆಗಿದ್ದೀರಿ.
ವಿದ್ಯಾಭ್ಯಾಸ ಮುಗಿಸಿ ನಿಮ್ಮೂರಿಂದ ಬೆಂಗಳೂರಿಗೆ ಬಂದ ನೀವು ‘ಟ್ಯೂಷನ್’ಗೆ ಒಂದು ಹೊಸ ಆಯಾಮವನ್ನೇ ತಂದಿರಿ. ಅನೇಕ ಪ್ರತಿಷ್ಠಿತರು ನಿಮ್ಮ ಟ್ಯೂಷನ್ ಶಿಷ್ಯರಾಗಿದ್ದರು ಎಂಬುದು ಹೆಮ್ಮೆಯ ಸಂಗತಿ. ಸದಾ ಜನರ ನಡುವೆ ಇರುವ, ಕೆಲಸದ ಒತ್ತಡದಲ್ಲಿರುವ ನೀವು ಕರೊನಾ ಲಾಕ್ಡೌನ್ನಂತಹ ಸಂದರ್ಭದಲ್ಲೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ನಿಮ್ಮಲ್ಲೂ ಒಬ್ಬ ‘ಶಿಕ್ಷಕ’ ಪ್ರಖರವಾಗಿ ಜೀವಂತವಾಗಿದ್ದಾನೆ ಎಂಬುದನ್ನು ತೋರಿಸಿದ್ದೀರಿ.
ಶಿಕ್ಷಣ ಮತ್ತು ಮಕ್ಕಳ ಕುರಿತಾಗಿ ನಿಮ್ಮಲ್ಲಿರುವ ಕಾಳಜಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮಲ್ಲಿನ ನೈಜ ಶಿಕ್ಷಕ ಸದಾ ಹಸಿರಾಗಿರಲಿ. ನಿಮ್ಮಲ್ಲಿರುವ ನಿಸ್ವಾರ್ಥ ಟ್ಯೂಷನ್ ಮೇಷ್ಟ್ರಿಗೆ ಒಂದು ಸಲಾಂ”. ಇದು ವೈ.ಎಸ್.ವಿ. ದತ್ತ ಅವರಿಗೆ ಸುರೇಶ್ ಕುಮಾರ್ ಬರೆದ ಪತ್ರದ ಸಾರಂಶ.
ಈ ಹಿಂದೆ ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕರಾಗಿ ಕೆಲಸ ಮಾಡಿದ್ದ ದತ್ತ ಅವರು ಸದ್ಯ ಇದೇ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ವಾರ ಗಣಿತ, ಇನ್ನೊಂದು ವಾರ ಭೌತಶಾಸ್ತ್ರ ವಿಷಯ ಭೋದಿಸುತ್ತಿದ್ದಾರೆ.
ಇದನ್ನೂ ಓದಿ 10ನೇ ತರಗತಿ ಮಕ್ಕಳಿಗೆ ‘ದತ್ತ ಮೇಷ್ಟ್ರು’ ಪಾಠ!