ಹಾಸನ: ಪ್ರತಿಯೊಂದು ವಿಷಯದಲ್ಲೂ ಆಕ್ಷೇಪ ಮಾಡುತ್ತಿರುವವರು ಹಿಂದೂ ಸಮಾಜವನ್ನು ಒಡೆಯುವ ಉದ್ದೇಶವನ್ನೇ ಇಟ್ಟುಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಭಾರತೀಯ ಸಂಸ್ಕೃತಿಗೆ ಬೇಕಾದ ಪುಸ್ತಕಗಳು ಯಾವಾಗ ಬಂದರೂ ಅದನ್ನು ವಿರೋಧಿಸುತ್ತಾ ಬಂದಿದ್ದಾರೆ. ಒಂದೇ ಸಮುದಾಯದವರನ್ನು ಓಲೈಕೆ ಮಾಡಲು ಹಿಂದುಗಳನ್ನೇ ವಿರೋಧ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಇದಕ್ಕಾಗಿ ಎಂದೇ ಒಂದಿಷ್ಟು ಜನ ಸಹಕಾರ ನೀಡುತ್ತಾರೆ, ಎಡಪಂಥೀಯ ಎಂಬ ಹೆಸರಲ್ಲಿ ನಮ್ಮ ಸಮಾಜ ಹಾಗೂ ಸಂಸ್ಕೃತಿಯನ್ನು ಒಡೆಯುವ ಉದ್ದೇಶ ಇವರದ್ದಾಗಿದೆ ಎಂದರು.
ನಮ್ಮ ಸಂಸ್ಕೃತಿಗೆ ತಕ್ಕಂತೆ ಇರುವ ಪಠ್ಯಗಳು ಬಂದಾಗ ಇವರು ಈ ರೀತಿಯ ತೊಡಕುಗಳನ್ನೇ ಮಾಡುವುದು ಸಾಮಾನ್ಯವಾಗಿದೆ. ಇದು ಈಗಿನಿಂದ ಅಲ್ಲ, ಇಂದಿರಾಗಾಂಧಿ ಅವರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಟೆಕ್ನಿಕಲ್, ಪ್ರಿಂಟಿಂಗ್ ಮಿಸ್ಟೇಕ್ ಇದ್ದರೆ ಅದನ್ನು ಸರಿಮಾಡಿಕೊಡುತ್ತೇವೆ. ನಾವು ವಿಶಾಲ ಯೋಚನೆ ಹೊಂದಿರುವವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.ಟಿಪ್ಪು ಸುಲ್ತಾನ್ ಅವರ ಬಗ್ಗೆ ಕಡಿಮೆಯಾಗಿ, ಕೆಂಪೇಗೌಡರ ಬಗ್ಗೆ ಜಾಸ್ತಿಯಾಗಿರುವುದಕ್ಕೆ ಕಾಂಗ್ರೆಸ್ನವರಿಗೆ ಬೇಜಾರು ತರಿಸಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)