ನವದೆಹಲಿ: ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯ ಪ್ರಕಾರ ದೇಶಿಯ ಒಟ್ಟು ಉತ್ಪನ್ನ(ಜಿಡಿಪಿ)ವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 5 ರಷ್ಟು ಬೆಳವಣಿಗೆಯಾಗಿದ್ದು, 2021ರ ಮಾರ್ಚ್ ಅಂತ್ಯಕ್ಕೆ ಶೇ 6 ರಿಂದ 6.5 ರ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷದ ಸಮೀಕ್ಷೆಯಲ್ಲಿ ಹಾಕಿಕೊಳ್ಳಲಾಗಿದ್ದ ಈ ವರ್ಷದ ಅಂದಾಜು ಶೇ. 7 ರ ಜಿಡಿಪಿ ಗುರಿಗೆ ಕೆಳಮುಖ ಬೆಳವಣಿಗೆಯಾಗಿದ್ದು, ತನ್ನ ಗುರಿ ತಲುಪಬೇಕಾದಲ್ಲಿ ಏಪ್ರಿಲ್ನಿಂದ ಆರಂಭವಾಗುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಲ ಸುಧಾರಣೆಗಳನ್ನು ಕೇಂದ್ರ ಸರ್ಕಾರ ತರಬೇಕಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಹೀಗಾಗಿ ಈ ವರ್ಷ ಕೇಂದ್ರ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ.
ಇನ್ನು ಆರ್ಥಿಕ ಸಮೀಕ್ಷೆ ಬಗ್ಗೆ ತಿಳಿಯಬೇಕಾದ ಪ್ರಮುಖಾಂಶಗಳೆಂದರೆ ಸಮೀಕ್ಷೆಯು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸಬ್ರಮಣಿಯನ್ ಮತ್ತು ತಂಡದಿಂದ ತಯಾರಾಗಿದೆ. ಬಜೆಟ್ ಮಂಡನೆಗೂ ಮುನ್ನಾದಿನ ಬಜೆಟ್ ಅಧಿವೇಶನದಲ್ಲಿ 2019-20 ಸಾಲಿನ ಆರ್ಥಿಕ ಸಮೀಕ್ಷೆಯನ್ನು ಪ್ರತಿ ವರ್ಷ ಬಿಡುಗಡೆ ಮಾಡಲಾಗುತ್ತದೆ.
ಹಣಕಾಸಿನ ಕೊರತೆಗೆ ಸಾಕಷ್ಟು ಸುಧಾರಣೆ ತರುವ ಗುರಿಯನ್ನು ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಸರ್ಕಾರ ಹಾಕಿಕೊಂಡಿದೆ. ಖಾಸಗಿ ಬಂಡವಾಳ ಹೆಚ್ಚಿಗೆ, ಮೂಲಭೂತ ಸೌಕರ್ಯ ಮೇಲೆ ಸರ್ಕಾರದಿಂದ ಹೆಚ್ಚು ಅನುದಾನ ಬಿಡುಗಡೆಯಾಗಬಹುದು ಎಂದು 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯನ್ನು ಇಂದು ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ್ದಾರೆ.
ಮಾರಾಟವಾಗದೇ ಉಳಿದಿರುವ ಆಸ್ತಿಗಳನ್ನು ಸಂಪೂರ್ಣ ತೆರವುಗೊಳಿಸಲು ರಿಯಲ್ ಎಸ್ಟೇಟ್ ಕಂಪನಿಗಳು ವಸತಿ ದರವನ್ನು ಖಂಡಿತವಾಗಿ ಕಡಿತಗೊಳಿಸಲಿವೆ ಎಂದು ಸಮೀಕ್ಷೆ ಹೇಳಿದೆ. ಅತಿ ಹೆಚ್ಚು ಮನೆ ಮಾರಾಟಗಳು ಬ್ಯಾಂಕ್ ಮತ್ತು ಬ್ಯಾಂಕೇತರ ಫೈನಾನ್ಶಿಯಲ್ ಕಂಪನಿಗಳ ಬ್ಯಾಲೆನ್ಸ್ ಶೀಟ್ ಅನ್ನು ಸ್ಪಷ್ಟವಾಗಿಸಲಿದೆ ಎಂದು ಹೇಳಿದೆ.
ವ್ಯಾಪಾರ ವಿಚಾರವಾಗಿ ಬಂದರೆ ಮುಂದುವರಿದಿರುವ ಜಾಗತಿಕ ವ್ಯಾಪಾರ ಒತ್ತಡದಿಂದ ಭಾರತದ ರಫ್ತಿನ ಮೇಲೆ ಹೊಡೆತ ಬೀಳಲಿದೆ ಎಂದು ಸಮೀಕ್ಷೆ ಹೇಳಿದೆ. ಭಾರತ ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಮಂದಗತಿಯನ್ನು ಎದುರಿಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ 4.5 ರಷ್ಟು ಕೆಳಗೆ ಜಾರಿತ್ತು. ಇದು ಪ್ರತಿ ವರ್ಷ ಕೆಲಸಕ್ಕೆ ಸೇರುವ ಲಕ್ಷಾಂತರ ಯುವ ಜನಾಂಗದ ಮೇಲೆ ಪ್ರಭಾವ ಬೀರಿತ್ತು ಎಂದು ಸಮೀಕ್ಷೆ ಹೇಳಿದೆ.
ಮೊದಲ ಹಂತದ ಬಜೆಟ್ ಅಧಿವೇಶನ ಇಂದು ಆರಂಭವಾಗಿದ್ದು, ಫೆ.11ರವರೆಗೂ ನಡೆಯಲಿದೆ. (ಏಜೆನ್ಸೀಸ್)