ಬೆಂಗಳೂರು: ತೆಲುಗು ಚಿತ್ರವನ್ನು ಮುಗಿಸಿ ಬಂದ ನಂತರ ಹೊಸ ಕನ್ನಡ ಚಿತ್ರದಲ್ಲಿ ತೊಡಗಿಸಿಕೊಳ್ಳೂವುದಾಗಿ “ದುನಿಯಾ’ ವಿಜಯ್ ಎರಡು ತಿಂಗಳ ಹಿಂದಷ್ಟೇ ಹೇಳಿದ್ದರು. ವಿಜಯ್ ಹೊಸ ಚಿತ್ರ ಶುರು ಮಾಡುವುದೇನಿದ್ದರೂ ತೆಲುಗು ಚಿತ್ರ ಮುಗಿದ ಮೇಲೆಯೇ. ಆದರೆ, ಅದಕ್ಕೂ ಮುನ್ನ ಶಿವರಾತ್ರಿಯಂದು ತಮ್ಮ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.
ಹೌದು, ಕಳೆದ ಕೆಲವು ತಿಂಗಳಿನಿಂದ ವಿಜಯ್ ಒಂದು ಕಥೆ ಬರೆಯುತ್ತಿದ್ದರಂತೆ. ಅದು ಈಗ ಒಂದು ಹಂತಕ್ಕೆ ಬಂದಿದ್ದು, ಮಾರ್ಚ್ 1ರಂದು ಸಂಜೆ ಐದು ಗಂಟೆ ಒಂದು ನಿಮಿಷಕ್ಕೆ ಹೆಸರು ಘೋಷಿಸಲಿದ್ದಾರೆ. ಇದು ವಿಜಯ್ ಅಭಿನಯದ 28ನೇ ಚಿತ್ರವಾದ್ದರಿಂದ, ಸದ್ಯಕ್ಕೆ “ವಿಕೆ 28′ ಎಂದು ಕರೆಯಲಾಗುತ್ತಿದೆ.
ಈ ಕುರಿತು “ವಿಜಯವಾಣಿ’ ಜತೆಗೆ ಮಾತನಾಡಿರುವ ಅವರು, “ಬಹಳ ದಿನಗಳಿಂದ ಒಂದು ಕಥೆಯ ಮೇಲೆ ವರ್ಕ್ ಮಾಡುತ್ತಲೇ ಇದ್ದೆ. ಇದೊಂದು ಬೇರೆ ತರಹದ ಕಥೆಯಾಗಿದ್ದು, ಸೂಕ್ಷ್ಮವಾದ ವಿಷಯವೊಂದನ್ನು ಹೇಳುವುದಕ್ಕೆ ಹೊರಟಿದ್ದೇನೆ. ಪೋಸ್ಟರ್ ನೋಡಿದರೆ ಇದೊಂದು ರಕ್ಷಸಿಕ್ತ ಚಿತ್ರ ಎಂದನಿಸಬಹುದು. ಆದರೆ, ಬೇರೆ ಒಂದು ಎಮೋಷನಲ್ ವಿಷಯವನ್ನುಹೇಳುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ.
ನಂದಮೂರಿ ಬಾಲಕೃಷ್ಣ ಅಭಿನಯದ “ಎನ್ಬಿಕೆ 107′ ಎಂಬ ತೆಲುಗು ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್, ಈಗಾಗಲೇ ಐದು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿ ಬಂದಿದ್ದಾರಂತೆ. “ಆ ಚಿತ್ರಕ್ಕೆ ಫ್ರೀ ಡೇಟ್ಸ್ ಕೊಟ್ಟಿದ್ದೇನೆ. ಅವರು ಸಹ ನಿಧಾನಕ್ಕೆ ಮತ್ತು ಅದ್ಧೂರಿಯಾಗಿ ಚಿತ್ರೀಕರಣ ಮಾಡುತ್ತಿರುವುದರಿಂದ, ಎಷ್ಟು ದಿನ ಆಗುತ್ತದೋ ಗೊತ್ತಿಲ್ಲ. ಹಾಗಾಗಿ, ಅದು ಮುಗಿಸ ಬಂದ ಮೇಲೆ, ಈ ಚಿತ್ರ ಶುರು ಮಾಡಲಿದ್ದೇನೆ. ಈ ಚಿತ್ರದಲ್ಲೂ “ಸಲಗ’ ಚಿತ್ರತಂಡವೇ ಮುಂದುವರೆಯಲಿದೆ’ ಎನ್ನುತ್ತಾರೆ.
“ಬೈರಾಗಿ’ ಚಿತ್ರವನ್ನು ನಿಮಿರ್ಸುತ್ತಿರುವ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಈ ಚಿತ್ರವನ್ನು ನಿಮಿರ್ಸುತ್ತಿದ್ದಾರೆ.