ಬೆಂಗಳೂರು: ದೊಡ್ಡ ಬಾಣಸವಾಡಿ ಮುಖ್ಯರಸ್ತೆಯಲ್ಲಿ 4 ದಿನಗಳ ಹಿಂದೆ ಖಾಸಗಿ ಶಾಲಾ ವಾಹನ ಅಡ್ಡಾದಿಡ್ಡಿ ಚಲಾಯಿಸಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಾದಾಚಾರಿ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.
ದೊಡ್ಡಬಾಣಸವಾಡಿ ನಿವಾಸಿ ಅಂಜಿನಪ್ಪ (60) ಮೃತ. 10ರ ಮಧ್ಯಾಹ್ನ 12.30ರಲ್ಲಿ ದೊಡ್ಡ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ನ್ಯೂ ಬಾಲ್ಡ್ವಿನ್ ಇಂಟರ್ನ್ಯಾಷನಲ್ ಸ್ಕೂಲ್ನ ಬಸ್ ರಾಮಮೂರ್ತಿನಗರ ಕಡೆಯಿಂದ ಹೊರಮಾವು ಜಂಕ್ಷನ್ ಕಡೆಗೆ ತೆರಳುವಾಗ ದೊಡ್ಡಬಾಣಸವಾಡಿ ಮುಖ್ಯರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಾದಚಾರಿ ಅಂಜಿನಪ್ಪ ಮತ್ತು ಎರಡು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.
ಅಂಜಿನಪ್ಪ, ದ್ವಿಚಕ್ರ ವಾಹನ ಸವಾರರಾದ ಮಂಜುನಾಥ್ ಮತ್ತು ಶಕ್ತಿ ಎಂಬುವರು ಗಾಯಗೊಂಡಿದ್ದರು. ಮಂಜುನಾಥ್ ಮತ್ತು ಶಕ್ತಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ನ ಚಾಲಕ ಸುಭಾಷ್ ಮದ್ಯಪಾನ ಮಾಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸುಭಾಷ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.