ಮೂಡಿಗೆರೆ: ಜೀವನ್ ಮಿಷನ್ ಯೋಜನೆಯಡಿ ಅನುದಾನ ಬಿಡುಗಡೆಯಾದರೂ ಕುಡಿಯುವ ನೀರಿನ ಕಾಮಗಾರಿ ಆರಂಭಿಸದಿರುವುದನ್ನು ಖಂಡಿಸಿ ಹೆಸಗಲ್ ಗ್ರಾಪಂ ಸದಸ್ಯರು ಸೋಮವಾರದಿಂದ ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಹೆಸಗಲ್ಗ್ರಾಪಂ ಸದಸ್ಯ ಶಿವಣ್ಣ ಮಾತನಾಡಿ, ಗ್ರಾಮದಲ್ಲಿ ನಾಲ್ಕೈದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಇದಕ್ಕಾಗಿ ಕಳೆದ ವರ್ಷ ಜಲ ಜೀವನ್ಮಿಷನ್ ಯೋಜನೆಯಡಿ 1ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.ಅದರ ಕಾಮಗಾರಿ ಆರಂಭಿಸದೆ ನಿರ್ಲಕ್ಷೃವಹಿಸಲಾಗಿದೆ ಎಂದು ಆರೋಪಿಸಿದರು.
ಸರ್ಕಾರ ಎರಡು ವರ್ಷದ ಹಿಂದೆ ಶುದ್ಧ ಕುಡಿಯುವ ನೀರು ಪೂರೈಸಲು ಅನುದಾನ ಮಂಜೂರು ಮಾಡಿದೆ. ಇದರಲ್ಲಿ ಓವರ್ ಹೆಡ್ ಟ್ಯಾಂಕ್ ಹಾಗೂ ಹಳ್ಳದಗಂಡಿ ನದಿ ತೀರದಲ್ಲಿ ತೆರೆದ ಬಾವಿ ಹಾಗೂ ಪೈಪು ಲೈನ್ ನಿರ್ಮಾಣ ಹಾಗೂ ಬೋರ್ವೆಲ್ ಕೊರೆಸಲು ನಿರ್ಧರಿಸಲಾಗಿತ್ತು. ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಕ್ತಾಯಗೊಂಡರೆ ಬಾಪುನಗರ, ಅರಳಿಗಂಡಿ, ಶಕ್ತಿನಗರ, ಬಣದೇವಿ ಎಸ್ಟೇಟ್ ನಿವಾಸಿಗಳಿಗೆ ಶುದ್ಧ ನೀರು ಪೂರೈಸ ಬಹುದು ಎಂದು ತಿಳಿಸಿದರು.
ಆದರೆ ಅಧಿಕಾರಿಗಳ ನಿರ್ಲಕ್ಷೃದಿಂದ ಎರಡು ವರ್ಷ ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಎರಡು ವರ್ಷದವರೆಗೆ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ತಾತ್ಸಾರ ಭಾವನೆ ಯಾಕೆ, ಕರ್ತವ್ಯ ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಾಪಂ ಇಒ ಡಾ.ರಮೇಶ್, ಗ್ರಾಮೀಣ ನೀರು ಮತ್ತು ನೈಮರ್ಲ್ಯ ಇಲಾಖೆ ಎಇಇ ನಾಗರಾಜ್ ಭೇಟಿ ನೀಡಿ, ಜೆಜೆಎಂ ಯೋಜನೆಯಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭಿಸಲು ಜಾಗದ ಸಮಸ್ಯೆ ಇತ್ತು. ಈಗ ಹೆಸಗಲ್ ಸರ್ಕಾರಿ ಶಾಲೆ ಆವರಣದಲ್ಲಿ ಜಾಗ ಗುರುತಿಸಲಾಗಿದೆ. ಅಲ್ಲದೆ ಇನ್ನು 20 ದಿನದಲ್ಲಿ ಬೋರ್ವೆಲ್ ಕೊರೆಸಲಾಗುವುದು. ನೀರಿನ ಟ್ಯಾಂಕ್ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಪಂ ಸದಸ್ಯರಾದ, ರವಿ ಕಡುವಳ್ಳಿ, ಪ್ರಶಾಂತ್, ಅಶೋಕ್, ಮಾಜಿ ಸದಸ್ಯರಾದ ಹೆಸ್ಕಲ್ ಗಿರೀಶ್, ಸಲಾವುದ್ದಿನ್, ರವಿ ಒಡೆಯರ್, ಸುರೇಶ, ಕೃಷ್ಣ, ಇತರರಿದ್ದರು.