More

    ಬೆಂಗಳೂರಿಗೆ ಕುಡಿಯುವ ನೀರಿನ ಬೇಗೆ! ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ

    ರಾಮ ಕಿಶನ್​ ಕೆ.ವಿ. ಬೆಂಗಳೂರು
    ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 92 ಅಡಿಗೆ ಕುಸಿಯುತ್ತಿದ್ದಂತೆ, ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ವಿವಿಧ ಬಡಾವಣೆಗಳಲ್ಲಿ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ದೈನಂದಿನ ಬಳಕೆಗೆ ಬೋರ್​ವೆಲ್​ ಅಥವಾ ಅನ್ಯ ಜಲಮೂಲದ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಖಾಸಗಿ ಟ್ಯಾಂಕರ್​ ಮಾಲೀಕರು ದುಪ್ಪಟ್ಟು ಹಣ ವಸೂಲು ಮಾಡುತ್ತಿರುವುದು ಬಡಜನರಿಗೆ ಹೊರೆಯಾಗಿ ಪರಿಣಮಿಸಿದೆ. ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಬೇಕಿದೆ. ವಿದ್ಯುತ್​ ಕಣ್ಣಾಮುಚ್ಚಾಲೆಯಿಂದಾಗಿ ನೀರಿನ ಪಂಪಿಂಗ್​, ಪೂರೈಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

    ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿದ್ದು, ನಿತ್ಯ 1,400 ಎಂಎಲ್​ಡಿ ನೀರಿನ ಅಗತ್ಯವಿದೆ. ಇದರನ್ವಯ ಮಾಸಿಕ 1.6 ಟಿಎಂಸಿ ನೀರು ಬೇಕಿದೆ. ಮುಂದಿನ ಜೂನ್​ ನಂತರವೇ ಕೆಆರ್​ಎಸ್​ಗೆ ಹೆಚ್ಚಿನ ಹರಿವು ಬರುವುದರಿಂದ ಅಲ್ಲಿಯವರಿಗೂ 9 ಟಿಎಂಸಿ ನೀರು ಬೇಕಾಗುತ್ತದೆ. ಕೆಆರ್​ಎಸ್​ನಲ್ಲಿ ನೀರಿನ ಮಟ್ಟ ಇನ್ನಷ್ಟು ಕುಸಿದಲ್ಲಿ ಬೇಡಿಕೆಯಷ್ಟು ಪೂರೈಕೆ ಅಸಾಧ್ಯವಾಗಬಹುದು. ಪರ್ಯಾಯ ಮೂಲವಾಗಿ ಕೊಳವೆಬಾವಿಯನ್ನು ಆಶ್ರಯಿಸಿದರೂ ಅಂತರ್ಜಲ ಕುಸಿತದಿಂದಾಗಿ ಅಗತ್ಯ ಪ್ರಮಾಣದ ನೀರು ಲಭ್ಯವಾಗುವ ಖಾತ್ರಿ ಇಲ್ಲ. ಈ ಕಾರಣದಿಂದಾಗಿ ಬೇಸಿಗೆ ದಿನಗಳಲ್ಲಿ ಜಲ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಜಲಮಂಡಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

    ಇದರ ಹೊರತಾಗಿಯೂ ನಗರದ ಯಾವ ಭಾಗಕ್ಕೂ ಕೊರತೆ ಉಂಟಾಗದಂತೆ ಬೇಸಿಗೆ ವೇಳೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

    ಟ್ಯಾಂಕರ್​ ಮಾಫಿಯಾ ಮುನ್ನೆಲೆಗೆ

    ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾದಾಗಲೆಲ್ಲ ಟ್ಯಾಂಕರ್​ ಮಾಫಿಯಾ ತಲೆಯೆತ್ತುತ್ತದೆ. ಈ ಬಾರಿ ರಾಜಧಾನಿ ಪ್ರದೇಶವೂ ಬರದ ಪಟ್ಟಿಯಲ್ಲಿದೆ. ಹೀಗಾಗಿ ಬೇಡಿಕೆಯಷ್ಟು ನೀರು ಪೂರೈಕೆ ಆಗದ ಕಾರಣ ಜನರು ಟ್ಯಾಂಕರ್​ ಮೊರೆ ಹೋಗಿದ್ದಾರೆ. ಅದರಲ್ಲೂ ಹೊರವಲಯದ ಬಹುತೇಕ ಕಡೆಗಳಲ್ಲಿ ಜನರು ಈಗಾಗಲೆ ಟ್ಯಾಂಕರ್​ ಮೂಲಕ ನೀರು ಪಡೆಯುತ್ತಿದ್ದಾರೆ. ಹೋಟೆಲ್​ ಹಾಗೂ ವಾಣಿಜ್ಯ ಮಳಿಗೆಯವರು ಕೂಡ ಟ್ಯಾಂಕರ್​ ನೀರನ್ನೇ ಆಶ್ರಯಿಸಿದ್ದಾರೆ. ಜಲಮಂಡಳಿಯು ಬಡವರು ವಾಸಿಸುವ ಪ್ರದೇಶಕ್ಕೆ ಸೀಮಿತ ಸಂಖ್ಯೆಯಲ್ಲಿ ಟ್ಯಾಂಕರ್​ ನೀರು ಪೂರೈಸುತ್ತಿದ್ದರೂ, ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

    110 ಹಳ್ಳಿಗಳಿಗೆ ಸಿಗುವುದೇ ಕಾವೇರಿ ನೀರು?

    ಬಿಬಿಎಂಪಿ ವ್ಯಾಪ್ತಿಯ110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಹಲವು ವರ್ಷಗಳಿಂದ ಪ್ರಗತಿಯಲ್ಲಿದೆ. ತಾಂತ್ರಿಕ ಕಾರಣವಿಡ್ಡಿ ಜಲಮಂಡಳಿ ಅದನ್ನು ಮುಂದೂಡುತ್ತಲೇ ಬಂದಿದೆ. ಶೇ.90 ಕಾಮಗಾರಿ ಮುಕ್ತಾಯವಾಗಿದ್ದು, ಮಾರ್ಚ್​ ಅಂತ್ಯಕ್ಕೆ ಕಾವೇರಿ 5ನೇ ಹಂತದ ಅಡಿಯಲ್ಲಿ ಪೂರೈಸಲು ನಿಗದಿಯಾಗಿರುವ ಗಡುವು ಮೀರದಿದ್ದರೆ ಸಾಕು.

    ಬರಿದಾದ ಕೊಳವೆಬಾವಿಗಳು

    ನಗರದಲ್ಲಿ ಈಗಾಗಲೆ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ನವೆಂಬರ್​ ವೇಳೆಗೆ ಬಹುತೇಕ ಬೋರ್​ವೆಲ್​ಗಳು ಬತ್ತಿಹೋಗುವ ಸ್ಥಿತಿಗೆ ತಲುಪಿದ್ದವು. ಇದರಿಂದಾಗಿ ಕಾವೇರಿ ನೀರು ಸಂಪರ್ಕ ಪಡೆಯದವರು ಕೂಡ ಬೋರ್​ವೆಲ್​ ನೀರಿಲ್ಲದೆ ಪರಿತಪಿಸುವಂತಾಗಿದೆ. ಕೊಳವೆಮಾರ್ಗ ಇದ್ದರೂ, ವಿವಿಧ ಕಾರಣದಿಂದಾಗಿ ಹಲವು ಬಡಾವಣೆಗಳಲ್ಲಿ ನೀರು ಪಡೆಯಲು ಜನರು ಪರದಾಡುವಂತಾಗಿದೆ.

    ಎಲ್ಲೆಲ್ಲಿ ನೀರಿನ ಅಭಾವ?

    ಯಲಹಂಕದ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಗೋವಿಂದಪುರ, ದಾಸರಹಳ್ಳಿ. ಮಹದೇವಪುರ ವಲಯದ ಚನ್ನಸಂದ್ರ, ಕಾಡಬೀಸನಹಳ್ಳಿ, ಹೊರಮಾವು. ಆರ್​.ಆರ್​. ನಗರ ವಲಯದ ಉಳ್ಳಾಲು, ವಸಂತಪುರ, ಹೆಮ್ಮಿಗೆಪುರ, ಹೊಸಹಳ್ಳಿ, ದಾಸರಹಳ್ಳಿ ವಲಯದ ಚಿಕ್ಕಲ್ಲಸಂದ್ರ, ಅಬ್ಬಿಗೆರೆ, ಹೊಸಹಳ್ಳಿ ಸೇರಿ ವಿವಿಧ ಭಾಗಗಳಲ್ಲಿ ನೀರಿನ ಅಭಾವ ಕಂಡುಬರುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts