ಹರಿಪ್ರಸಾದ್ ನಂದಳಿಕೆ
ಪ್ರತಿವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ಮಳೆಗಾಲಕ್ಕೆ ತಯಾರಾಗುತ್ತಿದ್ದ ಗ್ರಾಮ ಪಂಚಾಯಿತಿಗಳು, ಈ ಬಾರಿ ಲಾಕ್ಡೌನ್ ಕಾರಣದಿಂದ ಕಾರ್ಮಿರ ಕೊರತೆಯುಂಟಾಗಿದ್ದರಿಂದ ಸಿದ್ಧತೆ ಪೂರ್ಣಗೊಂಡಿಲ್ಲ.
ಕೆಲವು ದಿನಗಳಿಂದ ತಾಲೂಕಾದ್ಯಂತ ಹಲವೆಡೆ ಮಳೆ ಸುರಿಯುತ್ತಿದ್ದು ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನಿಲ್ಲುತ್ತಿವೆ. ಮಳೆಗಾಲ ಸಿದ್ಧತೆ ಬಗ್ಗೆ ಹಲವು ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಪೂರ್ವ ತಯಾರಿ ಇನ್ನೂ ಆರಂಭಿಸಿಲ್ಲ. ಹಲವಾರು ಕಡೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಚರಂಡಿ ಇರುವಲ್ಲಿ ಕಸ ಕಡ್ಡಿ, ಕಲ್ಲು, ಮಣ್ಣು ತ್ಯಾಜ್ಯದ ರಾಶಿಗಳು ತುಂಬಿವೆ. ಗ್ರಾಮೀಣ ಭಾಗದ ರಸ್ತೆ ಪಕ್ಕದಲ್ಲಿ ಮಳೆ ನೀರು ಕೃಷಿ ಭೂಮಿಗೇ ಹರಿಯುತ್ತಿದೆ.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವ ಸಿದ್ಧತೆ, ಚರಂಡಿ ನಿರ್ವಹಣೆಗೆಂದು ಸ್ಥಳಿಯಾಡಳಿತ ಅನುದಾನ ಇಟ್ಟರೂ ಅನುದಾನದ ಬಳಕೆ ಈ ಬಾರಿ ಕಂಡು ಬರುತ್ತಿಲ್ಲ. ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆಯ ಎರಡೂ ಬದಿ ನೆಟ್ವರ್ಕ್ ಕೇಬಲ್ ಅಳವಡಿಕೆ ನೆಪದಲ್ಲಿ ಚರಂಡಿ ಅಗೆದು ಮಣ್ಣಿನ ರಾಶಿ ಹಾಕಿದ್ದರಿಂದ ಚರಂಡಿಯೇ ಮಾಯವಾದಂತಿದೆ. ಜೋರಾಗಿ ಮಳೆ ಬಂದರೆ ರಸ್ತೆಯಲ್ಲೇ ಮಳೆ ನೀರು ನಿಲ್ಲುವ ಲಕ್ಷಣಗಳು ಹೆಚ್ಚಿವೆ. ಮಳೆ ಆರಂಭಗೊಂಡ ಬಳಿಕ ಚರಂಡಿ ನಿರ್ಮಾಣದತ್ತ ಗಮನ ಹರಿಸುವ ಸ್ಥಳೀಯಾಡಳಿತ ಮಳೆಗಾಲಕ್ಕೂ ಮುನ್ನವೇ ಚರಂಡಿ ನಿರ್ವಹಣೆಯತ್ತ ಗಮನ ಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರು ಹಾಗೂ ಕೃಷಿಕರು.
ಮಳೆಗಾಲ ಆರಂಭಗೊಂಡಿಲ್ಲದಿದ್ದರೂ ಕೃಷಿಕರು ಕೃಷಿ ಚಟುವಟಿಕೆಗಾಗಿ ಪೂರ್ವ ತಯಾರಿ ಆರಂಭಿಸಿದ್ದಾರೆ. ಮಳೆಗಾಲ ಆರಂಭಗೊಂಡ ಬಳಿಕ ಕೈಕಾಲು ಬಿಡುವುದಕ್ಕಿಂತ ಮೊದಲೇ ಪೂರ್ವ ತಯಾರಿ ಮಾಡಿಕೊಂಡರೆ ಸುಲಭವಾಗುತ್ತದೆ.
ಸುಧಾಕರ್ ಸಾಲ್ಯಾನ್, ಕೃಷಿಕ
ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿವರ್ಷವೂ ಚರಂಡಿ ನಿರ್ವಹಣೆ ಮಾಡುತ್ತೇವೆ. ಈ ಬಾರಿ ಪಂಚಾಯತಿ ವತಿಯಿಂದ ನಿರ್ವಹಣೆ ಮಾಡಲಾಗುತ್ತದೆ. ಈ ಬಾರಿ ಕರೊನಾ ಲಾಕ್ಡೌನ್ನಿಂದಾಗಿ ಸ್ವಲ್ಪ ವಿಳಂಬವಾಗಿದೆ.
ಸತೀಶ್ ಪೂಜಾರಿ, ಬೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ