ದೋರನಹಳ್ಳಿ: ಜನರ ಸಮಸ್ಯೆಗೆ ಸ್ಪಂದಿಸಲು ಸಂಕಷ್ಟದಲ್ಲಿರುವವರ ನೆರವಿಗೆ ಬರುವ ಉದ್ದೇಶದಿಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಉಪ ತಹಸೀಲ್ದಾರ್ ಕಚೇರಿ ಉತ್ತಮ ಸೇವೆ ನೀಡಲಿ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಗ್ರಾಮದ ಶ್ರೀ ಆದಿ ಸಂಗಮೇಶ್ವರ ದೇವಸ್ಥಾನ ಬಳಿ ನಿರ್ಮಾಣವಾಗಿರುವ ನೂತನ ನಾಡ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ಹಲವು ಅವಶ್ಯಕತೆಗಳು ಇವೆ. ಅವುಗಳನ್ನು ಪಡೆಯಲು ಸರ್ಕಾರದ ನೆರವು ಅಗತ್ಯವಾಗಿದೆ. ಈ ಉದ್ದೇಶದಿಂದ ಕಚೇರಿಯನ್ನು ಸ್ಥಾಪಿಸಲಾಗಿದ್ದು, ಜನರು ಇದರ ದ್ಬಳಕೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಹ ಸರಿಯಾಗಿ ಜನರೊಂದಿಗೆ ಬೆರೆತು ಕರ್ತವ್ಯ ನಿಷ್ಠೆ ಮೆರೆಯಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿ ಪರಿಹಾರ ಕಾರ್ಯಕ್ಕಾಗಿ ೯ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ೧೩ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಿದೆ. ಕೇಂದ್ರ ರಾಜ್ಯದಿಂದ ಸರಿಯಾದ ತೆರಿಗೆ ಪಡೆಯುತ್ತದೆ. ಆದರೆ ಸರಿಯಾದ ಪರಿಹಾರ ನೀಡುವುದಿಲ್ಲ ಎಂದು ಆರೋಪಿಸಿದರು.
ಸರ್ಕಾರದ ೫ ಗ್ಯಾರಂಟಿಯಿAದ ರಾಜ್ಯ ಹಾಳಾಗುತ್ತದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಪಂಚರಾಜ್ಯ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆ ಯಾಕೆ ಮಾಡುತ್ತಿದ್ದಾರೆ ಎಂದು ಖಾರವಾಗಿ ನುಡಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೆಮ್ಮದಿ ಕೇಂದ್ರದಿಂದ ೨೦೧೨ರಲ್ಲಿ ನಾಡ ಕಚೇರಿ ಆರಂಭವಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ್ ಉಮಾಕಾಂತ ಹಳ್ಳೆ ಸ್ವಾಗತಿಸಿದರು. ಶಿಕ್ಷಕ ಮಹಾದೇವಪ್ಪ ನಿರೂಪಣೆ ಮಾಡಿದರು.
ಗ್ರೇಡ್-೨ ತಹಸೀಲ್ದಾರ್ ಸೇತು ಮಾಧವ ಕುಲಕರ್ಣಿ, ಉಪ ತಹಸೀಲ್ದಾರ್ ಸಂಗಮೇಶ ನಾಯಕ, ಆರ್.ಐ.ಮಹೇಂದ್ರಸ್ವಾಮಿ, ದೇವರಾಜ ಪಾಟೀಲ್, ಗುಂಜಲಪ್ಪ ನಾಯಕ, ಜುಲ್ಪೇಕರ್, ಮಲ್ಲಮ್ಮ, ಸುಷ್ಮಾ, ರೇಣುಕಾ ಇತರರಿದ್ದರು.
ರಾಜ್ಯದಲ್ಲಿ ಮಳೆ ಅಭಾವದಿಂದ ಬೆಳೆ ಕೈ ತಪ್ಪುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ತೊಗರಿ ಬೆಳೆ ಸಂಪೂರ್ಣ ಹಾಳಾಗುವ ಹಂತದಲ್ಲಿದ್ದು, ರೈತರ ನೆರವಿಗೆ ಸರ್ಕಾರ ಬರಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ.
| ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ