ಸೋಮವಾರಪೇಟೆ: ಕಾಫಿ ಬೆಳೆಯುವ ರೈತರಿಗೆ ಸೆಸ್ಕ್ ಮಾನಸಿಕ ಕಿರುಕುಳ ಕೊಟ್ಟರೆ ರೈತರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ರೈತ ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.
ಸೋಮವಾರಪೇಟೆ ಸೆಸ್ಕ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್ ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದರು.
ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವವರೆಗೂ ಹೋರಾಟ ನಡೆಯಲಿದೆ. ಕಾಫಿ ಬೆಳೆಗಾರರ 10 ಎಚ್.ಪಿ.ವಿದ್ಯುತ್ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಲಕ್ಷ ರೂ.ದಾಟಿದೆ. ಬಿಲ್ ಮನ್ನಾ ಮಾಡುವ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಅಲ್ಲಿಯವರೆಗೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗಬಾರದು ಎಂದು ಹೇಳಿದರು.
ಕಾಫಿ ಕೂಡ ಆಹಾರ ಬೆಳೆಯಾಗಿದೆ. ರಾಜ್ಯದಲ್ಲಿ ಇತರ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಬೇಕು. ಡಿಬಿಟಿ ಸ್ಕೀಮ್ ನಮಗೆ ಬೇಡ ಎಂದು ಸಂಚಾಲಕ ಮಚ್ಚಂಡ ಅಶೋಕ್ ಹೇಳಿದರು. ರೈತರು ಸಂಕಷ್ಟದಲ್ಲಿ ಸೆಸ್ಕ್ನವರು ಕಿರುಕುಳ ಕೊಟ್ಟು ರೈತ ಆತ್ಮಹತ್ಯೆ ಮಾಡಿಕೊಂಡರೆ ಸೆಸ್ಕ್ ಕಚೇರಿ ಎದುರು ಇಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕೆಪಿಟಿಸಿಎಲ್ ಆದೇಶದಂತೆ ಕೆಲಸ ಮಾಡಬೇಕು. ಗ್ರಾಹಕರ ಬೇಡಿಕೆಗಳನ್ನು ನಿಗಮಕ್ಕೆ ತಿಳಿಸಲಾಗುವುದು ಎಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಸೋಮಶೇಖರ್ ಭರವಸೆ ನೀಡಿದರು.
ಹರಪಳ್ಳಿ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸೆಸ್ಕ್ ಇಇ ಅನಿತಾಬಾಯಿ, ಎಇಇ ರವಿ ಇದ್ದರು.