ಬೈಂದೂರು: ದೋಹಾ ಕತಾರ್ನ ಕರ್ನಾಟಕ ಸಂಘದ ವಾರ್ಷಿಕೋತ್ಸವ ಇತ್ತೀಚೆಗೆ ಕತಾರ್ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐ.ಸಿ.ಸಿ) ಅಶೋಕಾ ಸಭಾಂಗಣದಲ್ಲಿ ಜರುಗಿತು.
ಕತಾರ್ನ ಭಾರತೀಯ ರಾಯಭಾರಿ ಡಾ.ದೀಪಕ್ ಮಿತ್ತಲ್ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡದಲ್ಲಿ ಮಾತನಾಡುವ ಮೂಲಕ ಕರ್ನಾಟಕ ಸಂಘಕ್ಕೆ ಶುಭಕೋರಿದರು.
ಈ ಸಂದರ್ಭ ಸಂಘದ ಆಡಳಿತ ಸಮಿತಿ ಸದಸ್ಯರು ಹಚ್ಚೇವು ಕನ್ನಡದ ದೀಪ ಹಾಡನ್ನು ಪ್ರಸ್ತುತಪಡಿಸಿದರು. ನಂತರ ರಾಯಭಾರಿ ಸಂಘದ ವಾರ್ಷಿಕ ವಿಶೇಷ ಸಂಚಿಕೆ ಶ್ರೀಗಂಧ-2021ಯನ್ನು ಬಿಡುಗಡೆಗೊಳಿಸಿದರು.
ಕತಾರ್ನಲ್ಲಿ ಶಾಲೆಯ ಶಿಕ್ಷಣದಲ್ಲಿ ಕನ್ನಡ ಇಲ್ಲದ ಕಾರಣ ಕತಾರ್ ಕರ್ನಾಟಕ ಸಂಘದ ಅಡಿಯಲ್ಲಿ ಒಂದು ದಶಕದಿಂದ ಕನ್ನಡ ಕಲಿಕಾ ಕಾರ್ಯಕ್ರಮ ಸಾಗುತ್ತಾ ಬಂದಿದ್ದು, ಕಳೆದ ಐದು ವರ್ಷಗಳಿಂದ ಪ್ರತೀ ಶುಕ್ರವಾರ ಕನ್ನಡ ತರಗತಿ ನಡೆಸುತ್ತಿರುವ ಶಿಕ್ಷಕರಾದ ಪ್ರದೀಪಕುಮಾರ್ ದಿಲೀಪ್, ವಸಂತ್ ಕುಮಾರ್, ಯೋಗೀಶ್ ಪೈ, ಕಲಾವತಿ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಐ.ಸಿ.ಸಿ. ಅಧ್ಯಕ್ಷ ಬಾಬೂರಾಜನ್, ಐ.ಸಿ.ಸಿ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರ್ನ ಪೂರ್ವಾಧ್ಯಕ್ಷರು ಹಾಗೂ ಸಲಹಾ ಸಮಿತಿ ಸದಸ್ಯರಾದ ವಿ. ಎಸ್. ಮನ್ನಂಗಿ, ದೀಪಕ್ ಶೆಟ್ಟಿ, ಎಚ್.ಕೆ. ಮಧು, ಸತೀಶ್ ಕುಮಾರ್ ಉಪಸ್ಥಿತರಿದ್ದರು. ಸಂಘದ ಮಹಿಳಾ ಕಾರ್ಯದರ್ಶಿ ಸುಶೀಲ ಸುನೀಲ್ ಕಾರ್ಯಕ್ರಮ ನಿರ್ವಹಿಸಿದರು.
ಮನೋರಂಜನಾ ಕಾರ್ಯಕ್ರಮಗಳ ಸರಣಿಯಲ್ಲಿ ಮಕ್ಕಳಿಂದ ಸ್ವಾಗತ ನೃತ್ಯ, ಪ್ರಾದೇಶಿಕ ನೃತ್ಯ ರೂಪಕ, ಹೆಣ್ಣು ಮಗುವಿನ ಪ್ರಾಮುಖ್ಯತೆಯ ಬಗ್ಗೆ ಪ್ರಹಸನ ಹಾಗೂ ದಿ.ಪುನೀತ್ ರಾಜ್ಕುಮಾರ್ ಅವರ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕಿದರು.