ತಿರುವನಂತಪುರ: ಗರ್ಭಿಣಿ ಆನೆಗೆ ಸ್ಫೋಟಕ ಇರಿಸಿದ್ದ ಅನಾನಸ್ ತಿನ್ನಿಸಿ, ಸಾಯಿಸಿದ ಕೇರಳ ರಾಜ್ಯದಲ್ಲಿ ಇದೀಗ ಸಾಕುನಾಯಿಯೊಂದರ ಬಾಯಿಗೆ ಇನ್ಸುಲೇಷನ್ ಟೇಪ್ನ ಎರಡ್ಮೂರು ಪದರ ಸುತ್ತಿ ವಿಕೃತಿ ಮೆರೆಯಲಾಗಿದೆ.
ಮೂರು ವರ್ಷದ ಈ ನಾಯಿಯನ್ನು ಪ್ರಾಣಿಗಳ ಕ್ಷೇಮಾಭಿವೃದ್ಧಿ ಸೇವೆಗಳ ಸಂಘಟನೆ ಸದಸ್ಯರು ರಕ್ಷಿಸಿ, ಟೇಪ್ ಅನ್ನು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲವು ಪದರಗಳಲ್ಲಿ ಇನ್ಸುಲೇಷನ್ ಟೇಪ್ ಅನ್ನು ಸುತ್ತಿದ್ದರಿಂದ ಬಾಯಿ ತೆರೆಯಲಾಗದೆ, ಏನನ್ನೂ ತಿಂದು, ಕುಡಿಯಲು ಸಾಧ್ಯವಾಗದೆ ಪರದಾಡುತ್ತಿತ್ತು. ಹಲವು ದಿನಗಳಿಂದ ಹಸಿವಿನಿಂದ ಕಂಗಾಲಾಗಿದ್ದ ಈ ನಾಯಿಯ ಮೂಳೆಗಳು ಕಾಣಿಸಲಾರಂಭಿಸಿದ್ದವು.
ಇದನ್ನೂ ಓದಿ: ಬೆಂಗಳೂರಿನ ಬನಶಂಕರಿಯಲ್ಲಿ ಚಿರತೆ ಕಾಣಿಸಿಕೊಂಡಿತಾ? ನಿಜಾನಾ, ಸುಳ್ಳಾ?
ತ್ರಿಶೂರು ಜಿಲ್ಲೆಯ ಒಲೂರು ಎಂಬಲ್ಲಿ ರಸ್ತೆಯಲ್ಲಿ ದಿಕ್ಕುದೆಸೆಯಿಲ್ಲದ ತಿರುಗಾಡುತ್ತಿದ್ದ ಈ ನಾಯಿಯನ್ನು ಅನುಕಂಪಗೊಂಡ ಜನರು, ಅದರ ರಕ್ಷಣೆಗೆ ಮುಂದಾದಾಗ ಟೇಪ್ ಅನ್ನು ತೆಗೆಸಿಕೊಳ್ಳಲು ಸಹಕರಿಸಿತು. ಟೇಪ್ ಅನ್ನು ತೆಗೆಯುವಾಗ ಅದರ ಮೂತಿಯ ಚರ್ಮ ಕೂಡ ಕಿತ್ತುಕೊಂಡು ಬಂದಿತು ಎನ್ನಲಾಗಿದೆ.
ಟೇಪ್ ತೆಗೆದು, ನೀರನ್ನು ಕೊಡುತ್ತಲೇ ಅದು ಎರಡು ಲೀಟರ್ನಷ್ಟು ನೀರು ಕುಡಿದಿದೆ. ಅದಕ್ಕೆ ಒಂದಷ್ಟು ಆಹಾರ ಕೊಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ಪಶುಚಿಕಿತ್ಸಾಲಯಕ್ಕೆ ದಾಖಲಿಸಲಾಗಿದೆ. ಇದೀಗ ಅದು ಚೇತರಿಸಿಕೊಳ್ಳುತ್ತಿದೆ.
ನಾಯಿಯ ಕತ್ತಿನ ಸುತ್ತ ಬೆಲ್ಟ್ ಅನ್ನು ಕಟ್ಟಲಾಗಿತ್ತು. ಇದನ್ನು ಗಮನಿಸಿದಾಗ ಇದೊಂದು ಸಾಕು ನಾಯಿ ಇರಬೇಕು ಎನಿಸುತ್ತದೆ. ಆದ್ದರಿಂದ, ಈ ನಾಯಿಯನ್ನು ತಾವೇ ಸಾಕಿಕೊಳ್ಳಲು ಸ್ಥಳೀಯರೊಬ್ಬರು ನಿರ್ಧರಿಸಿದ್ದಾರೆ.