ಚನ್ನಗಿರಿ: ತಾಲೂಕಿನ ಜೋಳದಾಳು ಅಮ್ಮನಗುಡ್ಡ ಕುಕ್ಕುವಾಡೇಶ್ವರಿ ದೇವಸ್ಥಾನ ಬಳಿ, ಜಿಂಕೆಗಳ ಮೇಲೆ ನಾಯಿಗಳ ಹಿಂಡು ನಡೆಸಿದ ದಾಳಿಯಲ್ಲಿ 6 ವರ್ಷದ ಒಂದು ಜಿಂಕೆ ಸಾವನ್ನಪ್ಪಿ, ಮತ್ತೊಂದು ಜಿಂಕೆ ಗಾಯಗೊಂಡಿದೆ.
ಜಿಂಕೆಗಳ ಮೇಲಿನ ದಾಳಿ ತಪ್ಪಿಸಲು ಅರಣ್ಯ ಸಿಬ್ಬಂದಿ ಸಿಡಿಸಿದ ಫೈರ್ಗೆ ನಾಲ್ಕು ನಾಯಿಗಳು ಬಲಿಯಾಗಿವೆ.
ಅರಣ್ಯ ಪ್ರದೇಶ ವ್ಯಾಪ್ತಿಯ ದೇವಸ್ಥಾನ ಬಳಿ ಜಿಂಕೆಗಳು ಆಹಾರ ಅರಸಿ ಬಂದಾಗ ಇಪ್ಪತ್ತಕ್ಕೂ ಹೆಚ್ಚು ನಾಯಿಗಳ ಗುಂಪು ದಾಳಿ ನಡೆಸಿವೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೋವಿಯೊಂದಿಗೆ ಸ್ಥಳಕ್ಕೆ ಧಾವಿಸಿ ಫೈರಿಂಗ್ ಮಾಡಿದ್ದು ನಾಲ್ಕು ನಾಯಿಗಳು ಸ್ಥಳದಲ್ಲೇ ಮೃತಪಟ್ಟಿವೆ.
ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗಿದ್ದು, ಮೃತ ಜಿಂಕೆಯ ಶವಪರೀಕ್ಷೆ ನಡೆಸಿ ಸುಡಲಾಯಿತು.
ಕಾಡಿನಲ್ಲಿ ಆಹಾರ ಮತ್ತು ನೀರಿನ ಸಮಸ್ಯೆ ಇರುವ ಕಾರಣ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಜಿಂಕೆ ಕಾಪಾಡುವ ಉದ್ದೇಶದಿಂದ ಫೈರ್ ನಡೆಸಲಾಗಿತ್ತು ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ಸತೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಎಸಿಎಫ್ ಆರ್.ಡಿ. ಪುಟ್ನಳ್ಳಿ, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಪಶುವೈದ್ಯ ಡಾ.ಸಂತೋಷ್ ಇತರರಿದ್ದರು.