ಮಂಡ್ಯ: ಈ ಪ್ರೇಮಿಗಳ ಮದುವೆಯಾಗಿ ಬರೀ ಮೂರು ದಿನಗಳಷ್ಟೇ ಕಳೆದಿದ್ದವು. ಆದರೆ ಅಷ್ಟರಲ್ಲೇ ಇವರ ದಾಂಪತ್ಯದಲ್ಲಿ ಚೈತನ್ಯವೂ ಇಲ್ಲ, ತೇಜಸ್ಸೂ ಇಲ್ಲ ಎಂಬಂತಾಗಿದೆ. ಮದುವೆಯಾಗಿ ಸುಖವಾಗಿರಬೇಕಾದ ಈ ಪ್ರೇಮಿಗಳ ಪಾಲಿಗೆ ಪೊಲೀಸರೇ ದುಃಖ ಉಂಟು ಮಾಡಿದ್ದಾರಾ ಎಂಬ ಗುಮಾನಿ ಉಂಟಾಗಿದೆ. ಏಕೆಂದರೆ ಪ್ರೇಮಿಗಳಿಬ್ಬರು ಮದುವೆಯಾಗಿದ್ದರೂ ಪೊಲೀಸರ ಕಾರಣದಿಂದಾಗಿ ‘ಅವನಲ್ಲಿ, ಅವಳಿಲ್ಲಿ.. ಮಾತಿಲ್ಲ, ಕಥೆ ಇಲ್ಲ..’ ಎನ್ನುವಂತಾಗಿದೆ.
ಮಂಡ್ಯದ ಕಲ್ಲಹಳ್ಳಿಯ ನಿವಾಸಿ ತೇಜಸ್ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ಬಳಿಯ ವಾನಗೆರೆ ನಿವಾಸಿ ಚೈತನ್ಯ ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಇಬ್ಬರೂ ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಇವರ ಮದುವೆಗೆ ಯುವತಿಯ ಕಡೆಯವರಿಂದ ವಿರೋಧವಿತ್ತು. ಮಾತ್ರವಲ್ಲ, ಹುಡುಗಿಗೆ ಬೇಗ ಮದುವೆ ಮಾಡಲು ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನಡೆಸಲಿಕ್ಕೂ ಮನೆಯವರು ಮುಂದಾಗಿದ್ದರು.
ಪ್ರೇಮಿಯನ್ನು ಬಿಟ್ಟಿರಲಾಗದ ಚೈತನ್ಯ ಮನೆಯವರ ನಿರ್ಧಾರದಿಂದ ಆತಂಕಗೊಂಡು ಫೆ. 14ರಂದು ಮನೆ ಬಿಟ್ಟು ಮಂಡ್ಯಗೆ ಬಂದಿದ್ದಳು. ಫೆ. 15ರಂದು ಮಂಡ್ಯದ ದೇವಾಲಯವೊಂದರಲ್ಲಿ ಇಬ್ಬರೂ ಮದುವೆಯಾಗಿ, ಫೆ. 16ರಂದು ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯನ್ನೂ ಮಾಡಿಸಿಕೊಂಡಿದ್ದರು. ಆದರೆ ಫೆ. 18ರಂದು ಮಂಡ್ಯಗೆ ಬಂದಿದ್ದ ಯುವತಿಯ ಮನೆಯವರು, ಮಂಡ್ಯ ಪೊಲೀಸ್ ಠಾಣೆಗೆ ಇಬ್ಬರನ್ನೂ ಕರೆಸಿ ರಾಜಿ ಪಂಚಾಯಿತಿ ನಡೆಸಿದ್ದರು. ಅಲ್ಲದೆ ಪಿಎಸ್ಐ ವೆಂಕಟೇಶ್ ಮಧ್ಯಸ್ಥಿಕೆಯಲ್ಲಿ ಯುವತಿಯನ್ನು ಮರಳಿ ತವರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಒಂದು ವಾರದೊಳಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುವುದಾಗಿ ಪಂಚಾಯಿತಿ ನಡೆಸಿದ್ದ ಪೊಲೀಸರು ಹುಡುಗಿಯನ್ನು ತವರಿಗೆ ವಾಪಸ್ ಕಳುಹಿಸಿದ್ದರು. ಅವರು ಹೇಳಿದ್ದ ಗಡುವು ನಿನ್ನೆಗೆ ಮುಗಿದಿದೆ. ಆದರೆ ಈಗ ವಾಪಸ್ ಕಳುಹಿಸುವುದಿರಲಿ ನಮ್ಮಿಬ್ಬರಿಗೂ ಮಾತನಾಡಲೂ ಅವಕಾಶ ನೀಡುತ್ತಿಲ್ಲ. ನಾವು ದೂರ ದೂರವಾಗಲು ಪೊಲೀಸರೇ ಕಾರಣ ಎಂದು ಆರೋಪಿಸುತ್ತಿರುವ ತೇಜಸ್, ಇದೀಗ ಹೆಂಡತಿಯನ್ನು ಕರೆಸಿಕೊಡಿ ಎಂದು ಮಂಡ್ಯ ಎಸ್ಪಿಗೆ ದೂರು ನೀಡಲು ಮುಂದಾಗಿದ್ದಾನೆ. ಅತ್ತ ತನ್ನನ್ನು ನಿನ್ನ ಜೊತೆ ಮದ್ವೆ ಮಾಡಿಸುವುದಿಲ್ಲ, ಹೇಗಾದರೂ ಮಾಡಿ ನನ್ನನ್ನು ವಾಪಸ್ ಕರೆದುಕೊಂಡು ಹೋಗು ಎಂದು ಯುವತಿ ಅಂಗಲಾಚುತ್ತಿದ್ದಾಳೆ ಎನ್ನಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಮುಂದೆ ನಮಗೇನೇ ಆದರೂ ಮನೆಯವರೇ ಕಾರಣ; ವಿರೋಧದ ನಡುವೆ ಅಂತರ್ಜಾತಿ ವಿವಾಹವಾಗಿ ವಿಡಿಯೋ ಹರಿಬಿಟ್ಟ ಪ್ರೇಮಿಗಳು..
ಸೋತಿದ್ದೇನೆ, ಹೇಳೋಕೇನೂ ಇಲ್ಲ ಎಂದು ಕಣ್ಣೀರಿಟ್ಟ ಮೇಯರ್ ಸ್ಥಾನಾಕಾಂಕ್ಷಿ; ರಾಜೀನಾಮೆ ಕೊಡಲು ಮುಂದಾದ ಬಿಜೆಪಿ ಸದಸ್ಯೆ