ಗ್ವಾಲಿಯರ್: ಉದ್ಯೋಗ ಸಂದರ್ಶನಕ್ಕೆ ಹೋದ ಮೂವರು ಮಹಿಳಾ ಅಭ್ಯರ್ಥಿಗಳನ್ನು ಮಂಚಕ್ಕೆ ಕರೆದ ಬೀಜ ನಿಗಮದ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಈ ಘಟನೆ ಜನವರಿ 3ರಂದು ಗ್ವಾಲಿಯರನಲ್ಲಿರುವ ರಾಜಮಾತಾ ವಿಜಯರಾಜೆ ಸಿಂಧ್ಯಾ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ಬೀಜ ನಿಗಮದ ಕೆಲವು ಹುದ್ದೆಗಳಿಗೆ ಸಂದರ್ಶನ ಕರೆಯಲಾಗಿತ್ತು. ಉದ್ಯೋಗ ಅರಸಿ ಸಂದರ್ಶನಕ್ಕೆ ಆಗಮಿಸಿದ ಮೂವರು ಮಹಿಳೆಯರಿಗೆ ಸಂದರ್ಶನ ನಡೆಸಿದ ಬಳಿಕ ಅಲ್ಲಿನ ಅಧಿಕಾರಿಗಳು, ಅಭ್ಯರ್ಥಿಗಳನ್ನು ಕೆಲಸಗಾರರಿಗೆ ಪರಿಚಯಿಸುವ ನೆಪದಲ್ಲಿ ಲೈಗಿಂಕ ಬಯಕೆ ಈಡೇರಿಸುವಂತೆ ಒತ್ತಾಯ ಮಾಡಿ ಕಿರುಕುಳ ನೀಡಿದ್ದಾರೆ.
ಅಧಿಕಾರಿಗಳ ವರ್ತನೆಯಿಂದ ಸಿಟ್ಟಾದ ಸಂತ್ರಸ್ತೆಯೊಬ್ಬರು ಗ್ವಾಲಿಯರ್ನಲ್ಲಿರುವ ಅಪರಾದ ವಿಭಾಗಕ್ಕೆ ದೂರು ನೀಡಿದ್ದು, ಇದೀಗ ಕಾಮುಕ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲು ಭೋಪಾಲ್ಗೆ ಪೊಲೀಸ್ ತಂಡವೊಂದನ್ನು ಕಳುಹಿಸಲಾಗಿದೆ ಎಂದು ಎಎಸ್ಪಿ ರಿಷಿಕೇಶ್ ಮೀನಾ ತಿಳಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯ ಬೀಜ ಮತ್ತು ಕೃಷಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುನ್ನಾ ಲಾಲ್ ಗೋಯಲ್ ಮಾತನಾಡಿ, ಸೋಮವಾರ ಬೆಳಿಗ್ಗೆ ಮಾಹಿತಿ ಸಿಕ್ಕಿತು. ಸಂದರ್ಶನಕ್ಕೆ ಬಂದಿದ್ದ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇವೆ. ಅಪರಾಧ ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)
ನಾನು ಪ್ರಧಾನಿ ಮೋದಿ ಟೀಕಾಕಾರ, ಹೀಗಾಗಿ 3 ರಾಜಕೀಯ ಪಕ್ಷಗಳು ನನಗೆ ಟಿಕೆಟ್ ಆಫರ್ ಮಾಡಿವೆ: ನಟ ಪ್ರಕಾಶ್ ರಾಜ್