ತರೀಕೆರೆ: ಅಕ್ಕನಾಗಲಾಂಬಿಕೆ ಗದ್ದುಗೆ ಜೀರ್ಣೋದ್ಧಾರಕ್ಕೆ ಅಡ್ಡಿ, ಆತಂಕ ಎದುರಾಗಿದೆ. ಸೌಹಾರ್ದದಿಂದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಅಕ್ಕನಾಗಲಾಂಬಿಕೆ ಗದ್ದುಗೆ ಸಮೀಪದ ಸಮುದಾಯ ಭವನದಲ್ಲಿ ಕ್ಷೇತ್ರಾಭಿವೃದ್ಧಿ ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಜಗಜ್ಯೋತಿ ಬಸವಣ್ಣನ ಸಹೋದರಿ ಅಕ್ಕನಾಗಲಾಂಬಿಕೆ ಐಕ್ಯವಾದ ಸ್ಥಳ ಅಭಿವೃದ್ಧಿಗೆ ವರ್ಷಾನುಗಟ್ಟಲೆಯಿಂದ ಪ್ರಯತ್ನಗಳಾಗುತ್ತಿದ್ದು, ಸಮನ್ವಯ ಕೊರತೆಯಿಂದ ಹಿನ್ನಡೆಯಾಗಿದೆ. ಜಾತಿಭೇದ ಬಿಟ್ಟು ಗದ್ದುಗೆ ಜೀರ್ಣೋದ್ಧಾರಕ್ಕೆ ಎಲ್ಲರೂ ಶ್ರಮಿಸಬೇಕು. ಇಲ್ಲವೇ ಸರ್ಕಾರದ ವಶಕ್ಕೆ ನೀಡಿ ಸಹಕರಿಸಬೇಕು ಎಂದರು.
ವಚನ ಸಾಹಿತ್ಯ ಸಂರಕ್ಷಿಸಿದ ಅಪ್ರತಿಮ ಶಿವಶರಣೆ ಅಕ್ಕನಾಗಲಾಂಬಿಕೆ ಲಿಂಗೈಕ್ಯವಾದ ಸ್ಥಳದ ಜೀರ್ಣೋದ್ಧಾರಕ್ಕೆ 80ರ ದಶಕದಿಂದಲೂ ಪ್ರಯತ್ನ ನಡೆದಿದೆ. ಅಂದಿನ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಶಿಲಾನ್ಯಾಸ ನೆರವೇರಿಸಿದ್ದರು. ಅಷ್ಟಾದರೂ ನನೆಗುದಿಗೆ ಬಿದ್ದಿದ್ದ ಗದ್ದುಗೆ ಜೀರ್ಣೋದ್ಧಾರಕ್ಕೆ ಸಮಾನಮನಸ್ಕರ ಸಹಕಾರದಿಂದ ವೇಗ ನೀಡಲಾಗಿತ್ತು. ಸರ್ಕಾರ ಕೂಡ ಅಂದಾಜು 5 ಕೋಟಿ ರೂ.ನಷ್ಟು ಅನುದಾನ ನೀಡಿದ್ದು, ಬೃಹತ್ ಸಮುದಾಯ ಭವನ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಇಷ್ಟಾದರೂ ಹಲವು ಅಡೆತಡೆ ಎದುರಾಗಿರುವ ಕಾರ್ಯ ಅಂದುಕೊಂಡಂತೆ ಕಾರ್ಯಗತವಾದರೆ ಕ್ಷೇತ್ರ ಶರಣ ಸಂಸ್ಕೃತಿಯ ಅಧ್ಯಯನ ಕೇಂದ್ರದ ಜತೆ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆಯಲಿದೆ. ಎಲ್ಲರೂ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್, ವೀರಮಾತೆ ಅಕ್ಕನಾಗಲಾಂಬಿಕೆ ಲಿಂಗೈಕ್ಯ ಕ್ಷೇತ್ರಾಭಿವೃದ್ಧಿ ಸಮಿತಿ ಕಾರ್ಯದರ್ಶಿಗಳಾದ ಬಿ.ಪಿ.ಚಂದ್ರಶೇಖರ್, ಬಸವರಾಜಪ್ಪ, ಲೆಕ್ಕಪರಿಶೋಧಕ ಎ.ಸಿ.ನಾಗರಾಜ್, ಸದಸ್ಯರಾದ ಬಿ.ರಾಜಪ್ಪ, ಕೆ.ಆರ್.ಧ್ರುವಕುಮಾರ್ ಇತರರಿದ್ದರು.