ನೊಣವಿನಕೆರೆ: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶನಿವಾರ ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಗುರುಭವನಕ್ಕೆ ತೆರಳಿ ನೊಣವಿನಕೆರೆ ಅಜ್ಜಯ್ಯ ಹಾಗೂ ದೈವ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಬಳಿಕ ಕಾಡಸಿದ್ದೇಶ್ವರರ ಗದ್ದುಗೆಗೆ ತೆರಳಿ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಜತೆಯಲ್ಲಿರುವ ಶ್ರೀಮಠದ ಶಿಷ್ಯರೂ ಆದ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರ, ಸ್ಥಾನ ರಾಜಕೀಯ ಜೀವನದಲ್ಲಿ ಬರುವುದು ಹೋಗುವುದು ಸಾಮಾನ್ಯವಾಗಿದೆ, ಸಕಲ ಜೀವರಾಶಿಗಳು ಭೀಕರ ರೋಗದಿಂದ ಮುಕ್ತವಾಗಲಿ ಎಂದರು.
ಶಿವಕುಮಾರ್ ಆಗಮಿಸುವ ವಿಷಯ ತಿಳಿದು ಮಠದ ಆವರಣದಲ್ಲಿ ಜಮಾಯಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಡಿಕೆಶಿ ಭೇಟಿ ಮಾಡಿದರು. ಈ ವೇಳೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಪಕ್ಷಭೇದ ಮಾಡುತ್ತಿರುವುದರ ಬಗ್ಗೆ ನಗರಸಭೆ ಸದಸ್ಯರು ಅಳಲು ತೋಡಿಕೊಂಡರು.
ಧಾರ್ಮಿಕ ಕ್ಷೇತ್ರಕ್ಕೆ ಭೇಟಿಯಾಗಿದ್ದರಿಂದ ರಾಜಕೀಯ ಮಾತನಾಡುವುದು ಬೇಡ, ಈ ಬಗ್ಗೆ ಗಮನಹರಿಸಲಾಗುವುದು, ತಾಲೂಕಿನಲ್ಲಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಯ ವರದಿ ನೀಡುವಂತೆ ಸೂಚಿಸಿದರು. ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಎಂ.ಎನ್.ಕಾಂತರಾಜು, ತಾಪಂ ಉಪಾಧ್ಯಕ್ಷ ಎನ್.ಶಂಕರ್, ನಗರಸಭೆ ಸದಸ್ಯ ಯೋಗೇಶ್, ತಾಪಂ ಮಾಜಿ ಅಧ್ಯಕ್ಷ ಎನ್.ಎಂ.ಸುರೇಶ್ ಇತರರಿದ್ದರು.