ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಬುಧವಾರ ನಾಗವಾರದಲ್ಲಿರುವ ಅರೇಬಿಕ್ ಕಾಲೇಜ್ನಲ್ಲಿ ಮುಸ್ಲಿಂ ಧರ್ಮಗುರು ಅಮಿರ್-ಇ-ಷರಿಯತ್, ಮುಫ್ತಿ ಸಗೀರ್ ಅಹಮದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕರೋನಾ ಮಹಾಮಾರಿಯಿಂದ ಮುಕ್ತಿ ನೀಡುವಂತೆ ಧರ್ಮಗುರುಗಳು ಇದೇ ಸಂದರ್ಭದಲ್ಲಿ ದೇವರನ್ನು ಪ್ರಾರ್ಥಿಸಿದರು.
ಈ ವೇಳೆ ಡಿ.ಕೆ ಶಿವಕುಮಾರ್ ಮಾತನಾಡಿ, ಕರೊನಾ ಹರಡುವಿಕೆ ಸಂಬಂಧ ರಾಜಕೀಯ ಉದ್ದೇಶದಿಂದ ಒಂದು ಕೋಮಿನ ವಿರುದ್ಧ ಆರೋಪ ಮಾಡಲಾಯಿತು. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಎಲ್ಲರ ಹಿತ ಕಾಯಲು ಬದ್ಧವಾಗಿದೆ. ಸಮಾಜದ ಎಲ್ಲ ವರ್ಗದವರನ್ನು ಒಂದೇ ರೀತಿ ಕಾಣಬೇಕು. ತಪ್ಪು ಮಾಡಿದವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದರು.
ನಾನು ಮುಸ್ಲಿಂ ಧರ್ಮಗುರುಗಳನ್ನು ಮಾತ್ರವಲ್ಲ, ಎಲ್ಲ ಧರ್ಮಗಳ ಗುರುಗಳನ್ನೂ ಭೇಟಿ ಮಾಡಿದ್ದೇನೆ. ನಾಡಿನ, ಸಮಾಜದ ಒಳಿತಿಗಾಗಿ ಅವರೆಲ್ಲರೂ ಪ್ರಾರ್ಥನೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಒಂದು ಸಮಾಜವನ್ನು ಓಲೈಸುವ ಉದ್ದೇಶ ಇಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.