ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೃತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದವರ ಪೈಕಿ ಒಬ್ಬರಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಸುರೇಶ್ ದೊಡ್ಡ ಶಾಕ್ ನೀಡಿದ್ದಾರೆ.
ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಕಾರ್ಯಪ್ರವೃತ್ತರಾಗಿರುವ ಡಿಕೆ ಬ್ರದರ್ಸ್ ಕಾಂಗ್ರೆಸ್ನಿಂದ ದೂರ ಉಳಿದಿದ್ದವರನ್ನು ವಾಪಸ್ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದರ ಫಲವಾಗಿ ಶಾಸಕ ಮುನಿರತ್ನ ಪರಮಾಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಬಿಬಿಎಂಪಿ ಸದಸ್ಯರುಗಳಾದ ವೇಲು ನಾಯ್ಕರ್, ಮೋಹನ್ ಕುಮಾರ್ ಹಾಗೂ ಶ್ರೀನಿವಾಸ ಮೂರ್ತಿ ಬಿಜೆಪಿ ತೊರೆದು ಜುಲೈ 23ರಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಸುತ್ತಾಟ; ಇಲಿ ಪಾಷಾಣ ತಿಂದು ಪ್ರಾಣ ಬಿಟ್ಟ ಯುವತಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ KGFನಿಂದ ಮಾಜಿ ಬಿಬಿಎಂಪಿ ಸದಸ್ಯ ವೇಲು ನಾಯ್ಕರ್ ಟಿಕೆಟ್ ಬಯಸಿದ್ದರು. ಆದರೆ, ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಟಿಕೆಟ್ ಸಿಗದೆ ಅತೃಪ್ತರಾಗಿದ್ದ ವೇಲು ನಾಯ್ಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಆರ್ಆರ್ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ರವಿ ಉಪಸ್ಥಿತರಿದ್ದರು.