ಗೋಣಿಕೊಪ್ಪ: ಕ್ರೀಡೆ ಎಂಬುದು ದೈಹಿಕ ವ್ಯಾಯಾಮ. ಕೀಡೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಕೇಂದ್ರೀಕೃತವಾಗಲಿದೆ ಎಂದು ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ.ದಯಾನಂದ ಪ್ರಭು ಅಭಿಪ್ರಾಯಪಟ್ಟರು.
ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ, ಸಂತ ಅನ್ನಮ್ಮ ದೇವಾಲಯ ವತಿಯಿಂದ ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ 12ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಪುರುಷರ 5+2 ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ವ್ಯಕ್ತಿ ದೈನಂದಿನ ಚಟುವಟಿಕೆಗಳಲ್ಲಿ ತಲ್ಲೀನನಾಗಿದಿದ್ದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಮಾನಸಿಕ, ದೈಹಿಕ, ಸಂಸಾರಿಕವಾಗಿ ಆರೋಗ್ಯದಾಯಕವಾಗಿರಲು ಕ್ರೀಡೆ ಹೆಚ್ಚು ಸಹಕಾರಿ ಎಂದು ಹೇಳಿದರು.
ಕಾಂಗ್ರೆಸ್ ನಗರಾಧ್ಯಕ್ಷ ಮಾದಂಡ ಪಿ.ತಿಮ್ಮಯ್ಯ ಮಾತನಾಡಿ, 11 ವರ್ಷಗಳಿಂದ ಪಂದ್ಯಾಟ ನಡೆಸಿಕೊಂಡು ಬರುತ್ತಿರುವುದು ಸಂತೋಷದಾಯಕ ಬೆಳವಣಿಗೆ. ಕ್ರೀಡೆಗಳ ಆಯೋಜನೆ ಕಷ್ಟಸಾಧ್ಯವಾದರೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಂದ್ಯಾಟಗಳನ್ನು ಅಯೋಜಿಸಲಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಬಾಬು ನರ್ಹೋನ, ಉದ್ಯಮಿ ಚೋಫಿ ಜೋಸೆಫ್ ಮಾತನಾಡಿದರು. ಪುರಸಭೆ ಸದಸ್ಯರಾದ ಬೆನ್ನಿ ಆಗಸ್ಟಿನ್, ಉದ್ಯಮಿ ಜ.ಅಖೀಲ್, ದಿವ್ಯಜ್ಯೋತಿ ಸಹಕಾರ ಬ್ಯಾಂಕ್ನ ನಿರ್ದೇಶಕಿ ಅನಿತಾ ಲೋಬೋ, ಸಂತ ಅನ್ನಮ್ಮ ವಿವಿದ್ಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮರ್ವಿನ್ ಲೋಬೋ, ಸದಸ್ಯರಾದ ಜೋಕಿಂ ರೋಡ್ರಿಗ್ರಸ್ಸ್, ವಿರಾಜಪೇಟೆ ನಗರ ಠಾಣಾಧಿಕಾರಿ ರವೀಂದ್ರ, ಉದ್ಯಮಿ ಜೀವನ್ ಬಾರ್ನಡ್, ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಫ್ರಾನ್ಸಿಸ್ ಲೋಬೋ ಇದ್ದರು.
ಕಾಲ್ಚೆಂಡು ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು 22 ತಂಡಗಳು ಭಾಗವಹಿಸುತ್ತಿವೆ.