ಮಂಡ್ಯ: ಕಬಡ್ಡಿ ಎನ್ನುವುದು ಜಿಲ್ಲೆಯ ಹಿರಿಮೆಯ ಕ್ರೀಡೆಯಾಗಿದೆ ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಎಂ.ಸಿ ರಸ್ತೆಯ ಜ್ಞಾನಸಾಗರ ಕ್ಯಾಂಪಸ್ ಆವರಣದಲ್ಲಿ ತಾವರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆಯ 25ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಐಟಿಐ ಕಬಡ್ಡಿ ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಐಟಿಐ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಸಿ.ಆರ್.ನಾಗರಾಜು ಮಾತನಾಡಿ, ಮಕ್ಕಳಿಗೆ ಪಾಠ ಪ್ರವಚನಗಳ ಜತೆಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮವೂ ಮುಖ್ಯ. ಇದರಿಂದ ಅವರು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗುವ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಐಟಿಐ ಕಾಲೇಜು ಮಕ್ಕಳಿಗೆ ಕ್ರೀಡಾ ಚಟುವಟಿಕೆ ಆಯೋಜಿಸುವುದು ವಿರಳ. ಇಂತಹ ಸಂದರ್ಭದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್ ವತಿಯಿಂದ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜವೆಂದು ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜು ಶೈಕ್ಷಣಿಕ ಪಾಲುದಾರ ಎಚ್.ಎಂ.ಶ್ರೀನಿವಾಸ್, ಐಟಿಐ ಕಾಲೇಜು ಪ್ರಾಂಶುಪಾಲ ಪ್ರವೀಣ್ಕುಮಾರ್, ಪ್ರಸನ್ನ, ಸುರೇಶ್, ಪರಮೇಶ್, ಟ್ರಸ್ಟ್ ಆಡಳಿತಾಧಿಕಾರಿ ತನ್ಮಯ್, ಕರ್ನಾಟಕ ಜೂನಿಯರ್ ತಂಡದ ನಾಯಕಿ ಹಂಶಿತಾ ಇದ್ದರು.