ಕೊಪ್ಪಳ: ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಭವಿಷ್ಯ ನಿರ್ಧರಿಸುವ ಸಮಯ. ನಮ್ಮ ಸಮುದಾಯದ ಎಲ್ಲ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಆರ್ಯವೈಶ್ಯ ಸಂದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಹೇಳಿದರು.
ತಾಲೂಕಿನ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಜೀವನೋಪಾಯ ಕ್ರಮ ಹಾಗೂ ಆಪ್ತಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಭವಿಷ್ಯದಲ್ಲಿ ಈ ಹಂತ ಪ್ರಮುಖವಾಗಿದೆ. ನಮ್ಮ ಜಿಲ್ಲೆಯೂ ಕಳೆದ ವರ್ಷ 15ನೇ ಸ್ಥಾನ ಪಡೆದು ಉತ್ತಮ ಹಂತದಲ್ಲಿದೆ. ಈ ವರ್ಷ ಟಾಪ್ 10ರೊಳಗೆ ಬರಬೇಕಿದೆ. ಇದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು. ನಮ್ಮ ಸಮುದಾಯ ಸಂಘಟನೆಯಿಂದಲೂ ಕಾರ್ಯಾಗಾರ ಹಮ್ಮಿಕೊಂಡಿರುವುದು ಉತ್ತಮ ಕೆಲಸ ಎಂದರು.
ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಶಾಲಾ ಶಿಕ್ಷಣದ ಜತೆಗೆ ಸಾಮಾನ್ಯ ಜ್ಞಾನ ಮುಖ್ಯ. ಇದರಿಂದ ಜೀವನದಲ್ಲಿ ಯಶಸ್ಸು ಕಾಣಲು ಅನುಕೂಲವಾಗಲಿದೆ. ವಿದೇಶಿ ಶಿಕ್ಷಣ ಪದ್ಧತಿ ಹಾಗೂ ನಮ್ಮ ದೇಶದ ಶಿಕ್ಷಣ ಪದ್ಧತಿಗೆ ವ್ಯತ್ಯಾಸವಿದೆ. ವಿದೇಶದಲ್ಲಿ ಮಕ್ಕಳು 14 ವರ್ಷ ಇರುವಾಗಲೇ ಮುಂದೇ ತಾವೇನಾಗಬೇಕೆಂದು ಗುರಿ ಇಟ್ಟುಕೊಳ್ಳುತ್ತಾರೆ. 20ನೇ ವಯಸ್ಸಿಗೆ ಬರುವಷ್ಟರಲ್ಲಿ ಗುರಿ ತಲುಪುತ್ತಾರೆ. ಅದರಂತೆ ನಮ್ಮ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ ವಿದ್ಯಾರ್ಥಿಗಳಿಗೆ ಲಿತಾಂಶ ಸುಧಾರಣೆ, ಅಧ್ಯಯನ ವಿಧಾನ, ವಿಷಯ ಗ್ರಹಿಕೆ ಕುರಿತು ಮಾಹಿತಿ ಹಾಗೂ ತರಬೇತಿ ನೀಡಿದರು. ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭೆ ಅಧ್ಯಕ್ಷ ಎಸ್.ಸುನಿಲ್, ಪ್ರ.ಕಾ.ಭೀಮರಾಜ್ , ಚರನ್ ಕೆ.ಆರ್.ಎನ್, ರಾಕೇಶ ಪಾನಘಂಟಿ, ನಾರಾಯಣ ಕುರುಗೋಡ, ಅರುಣ ಕುಮಾರ್ ಶೆಟ್ಟರ್ ಇತರರಿದ್ದರು.