ಕೊಪ್ಪಳ: ಅಮೃತ ಸ್ಟೇಷನ್ ಯೋಜನೆಯಡಿ ಕೇಂದ್ರ ಸರ್ಕಾರ ಕೊಪ್ಪಳ ರೈಲು ನಿಲ್ದಾಣ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಎಂದು ಸಂಸದ ಸಂಗಣ್ಣ ಕರಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ರೈಲ್ವೆ ನಿಲ್ದಾಣ ಕಟ್ಟಡ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು.
ಯೋಜನೆಯಡಿ ಮುನಿರಾಬಾದ್ ನಿಲ್ದಾಣವೂ ಆಯ್ಕೆಯಾಗಿದ್ದು, ಎರಡೂ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ. ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಅಭಿವೃದ್ಧಿ ಶೂನ್ಯ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 9 ವರ್ಷದಲ್ಲಿ ಜಿಲ್ಲೆಯ 7 ತಾಲೂಕುಗಳು ರೈಲ್ವೆ ಸಂಪರ್ಕ ಕಾಣುವಂತಾಗಿದೆ. ಕೆಲವೇ ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲಿ ರೈಲು ಓಡಾಡಲಿದೆ ಎಂದರು.
ಗಿಣಿಗೇರಾ-ಮೆಹಬೂಬ್ ನಗರ ರೈಲ್ವೆ ಯೋಜನೆ ಕಾಂಗ್ರೆಸ್ ಘೋಷಿಸಿದರೂ ಅನುದಾನ ನೀಡಲಿಲ್ಲ. ನಾವು ಮುಂದುವರೆಸಿದ್ದೇವೆ. ಹಳೆಯ ಎಲ್ಲ ಕಾಮಗಾರಿ ಪೂರ್ಣಗಳಿಸಲಾಗುತ್ತಿದೆ. ಯೋಜನೆ ಘೋಷಣೆ ಮುಖ್ಯವಲ್ಲ. ಅನುಷ್ಠಾನ ಮಾಡಬೇಕು.
ವಿಶ್ವದಲ್ಲೇ ಭಾರತದಲ್ಲಿ ರೈಲ್ವೆ ಯೋಜನೆ ವೇಗವಾಗಿ ನಡೆಯುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ದೂರದೃಷ್ಟಿಯೇ ಕಾರಣ ಎಂದು ಪ್ರಶಂಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ ಹಾಗೂ ರೈಲ್ವೆ ಅಧಿಕಾರಿಗಳಿದ್ದರು.
ಅಯೋಧ್ಯೆ-ಅಂಜನಾದ್ರಿಗೆ ರೈಲ್ವೆ ಸಂಪರ್ಕಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಗಂಗಾವತಿ ನಿಲ್ದಾಣವನ್ನು ಅಮೃತ್ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು.
ಸಂಗಣ್ಣ ಕರಡಿ. ಕೊಪ್ಪಳ.