ಕೊಪ್ಪಳ: ಸರ್ಕಾರದ ಮಾಂಗಲ್ಯ ಭಾಗ್ಯ ಯೋಜನೆಯಡಿ ಮೊದಲ ಬಾರಿಗೆ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯದಲ್ಲಿ ಬುಧವಾರ 69 ಜೋಡಿಗಳಿಗೆ ಸಾಮೂಹಿಕ ವಿವಾಹ ಜರುಗಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ ವಧು-ವರರು ದೇವಿ ಸನ್ನಿಧಾನದಲ್ಲಿ ನವ ಜೀವನಕ್ಕೆ ಕಾಲಿಟ್ಟರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎ ಗ್ರೇಡ್ ದೇವಾಲಯಗಳಲ್ಲಿ ಸಪ್ತಪದಿ ಹೆಸರಿನಲ್ಲಿ ಸಾಮೂಹಿಕ ವಿವಾಹ ನಡೆಸುವುದಾಗಿ ಯೋಜನೆ ರೂಪಿಸಲಾಯಿತು. ಕೋವಿಡ್ ಸೇರಿ ನಾನಾ ಕಾರಣಗಳಿಗೆ ಮದುವೆ ಹಲವು ಬಾರಿ ಮುಂದೂಡಲಾಗಿದೆ. ಮೊದಲ ಬಾರಿಗೆ ಬುಧವಾರ ನಡೆದಿದ್ದು, ನೋಂದಣಿಯಾದ 74 ಜೋಡಿಗಳ ಪೈಕಿ 69 ಜೋಡಿಗಳಿಗೆ ವಿವಾಹ ನೆರವೇರಿಸಲಾಯಿತು. ಬಾಕಿ ಐದು ಜೋಡಿಗಳು ವಿವಿಧ ಕಾರಣದಿಂದ ಮದುವೆಯಿಂದ ದೂರ ಉಳಿದವು.
ವರನಿಗೆ ಹೂವಿನ ಹಾರ, ಪಂಚೆ, ಅಂಗಿ, ಶಲ್ಯ ಸೇರಿ ಇತರ ಖರ್ಚಿಗೆ ತಲಾ 5 ಸಾವಿರ ರೂ., ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ, ಕಣಕ್ಕೆ ತಲಾ 10 ಸಾವಿರ ರೂ. ಹಾಗೂ ಎರಡು ತಾಳಿ ಗುಂಡಿಗೆ 40 ಸಾವಿರ ರೂ. ದೇವಸ್ಥಾನ ನಿಧಿ ಬಳಕೆ ಮಾಡಲಾಗಿದೆ.
ನವ ದಂಪತಿಗಳು ಹುಲಿಗೆಮ್ಮ ದೇವಿಯ ದರ್ಶನ ಪಡೆದರು. ಸಾರ್ವಜನಿಕರಿಗಾಗಿ ಸಾಮೂಹಿಕ ಭೋಜನ ವ್ಯವಸ್ಥೆ ಕಲ್ಪಿಸಲಾಯಿತು. ಸಂತೋಷ ಕೊರಗಲ್ ಎಂಬುವರು ನವ ಜೋಡಿಗಳಿಗೆ ಸಸಿ ವಿತರಸಿ ಶುಭ ಕೋರಿದರು.