ಶಿವಮೊಗ್ಗ: ಮತದಾನ ಜಾಗೃತಿ ಅಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಘೋಷಣೆಯೊಂದಿಗೆ ಜಿಲ್ಲಾಡಳಿತದಿಂದ ಭಾನುವಾರ ವಿವಿಧೆಡೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಚುನಾವಣಾ ಆಯೋಗ ಸಿದ್ಧಪಡಿಸಿದ ವಿಶೇಷ ಧ್ವಜಾರೋಹಣ ಬಹುತೇಕ ಬೂತ್ಗಳಲ್ಲಿ ನೆರವೇರಿತು.
ರಂಗೋಲಿ ಸ್ಪರ್ಧೆ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾ, ರಸಪ್ರಶ್ನೆ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಮತದಾನ ಜಾಗೃತಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಕೆಎಸ್ಆರ್ಟಿಸಿ ಬಸ್ ಸ್ವೀಪ್ ಎಕ್ಸ್ಪ್ರೆಸ್ ಜಿಲ್ಲೆಯ ವಿವಿಧೆಡೆ ಸಂಚರಿಸಿತು. ಸ್ಥಳೀಯವಾಗಿ ಪಿಡಿಒ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ವಿನೋಬನಗರದ ಡಿವಿಎಸ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ. ಆರ್.ಸೆಲ್ವಮಣಿ ಧ್ವಜಾರೋಹಣ ನೆರವೇರಿಸಿ, ಕಡ್ಡಾಯ ಮತದಾನಕ್ಕೆ ಮನವಿ ಮಾಡಿದರು.
ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೇ ಮತದಾನ ಕಡಿಮೆಯಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ಇದುವರೆಗಿನ ಮತದಾನದ ದಾಖಲೆಗಳನ್ನೂ ಮೀರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮತ ಚಲಾವಣೆಗೆ ಎಲ್ಲರೂ ಸಹಕರಿಸಬೇಕೆಂದರು.
ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮಾತನಾಡಿ, ಮತದಾನ ಜಾಗೃತಿಯ ಮುಖ್ಯ ಉದ್ದೇಶ ಮತದಾನ ಪ್ರಮಾಣದ ಹೆಚ್ಚಳ. ವಿವಿಧ ಚಟುವಟಿಕೆಗಳ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅರ್ಹರೆಲ್ಲರೂ ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕೆಂದು ಹೇಳಿದರು.
ಡೊಳ್ಳು ಕುಣಿತದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ನಗರಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು ವಿನೋಬನಗರದ ಮತದಾರರು, ಬಿಎಲ್ಒಗಳು, ಪಾಲಿಕೆ ಸ್ವೀಪ್ ಅಧಿಕಾರಿಗಳಾದ ಸುಪ್ರಿಯಾ, ಅನುಪಮಾ ಇತರರಿದ್ದರು.