ಗೋಣಿಕೊಪ್ಪ: ಇಲ್ಲಿನ ಕಾಪ್ಸ್ ವಿದ್ಯಾಸಂಸ್ಥೆಯಲ್ಲಿ ತರಬೇತಿ ಹೊಂದಿದ 150ಕ್ಕೂ ಹೆಚ್ಚು ಕರಾಟೆ ಪಟುಗಳಿಗೆ ಭಾನುವಾರ ಕಲರ್ ಬೆಲ್ಟ್ ಹಾಗೂ ಸರ್ಟಿಫಿಕೇಟ್ ನೀಡಲಾಯಿತು.
ಕರಾಟೆ ತರಬೇತಿದಾರ ಜಮ್ಮಡ ಜಯಜೋಯಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 4 ವರ್ಷದಿಂದ 50 ವರ್ಷದೊಳಗಿನ ಯುವಕ-ಯುವತಿಯರು ಸೇರಿದಂತೆ ಹಿರಿಯರು ತರಬೇತಿಯಲ್ಲಿ ಭಾಗವಹಿಸಿ ಸಾರ್ವಜನಿಕರೆದುರು ಕರಾಟೆ ಅಭ್ಯಾಸವನ್ನು ಪ್ರದರ್ಶಿಸಿದರು.
ಲಯನ್ಸ್ ವಿದ್ಯಾಸಂಸ್ಥೆ, ಕಾಪ್ಸ್ ವಿದ್ಯಾಸಂಸ್ಥೆ ಹಾಗೂ ಮಹಿಳಾ ಸಮಾಜದಲ್ಲಿ ವಿದ್ಯಾರ್ಥಿಗಳು ಕರಾಟೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇವರಿಗೆ ಗ್ರೇಡಿಂಗ್ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. 10 ವಿದ್ಯಾರ್ಥಿಗಳು ಬ್ಲಾೃಕ್ ಬೆಲ್ಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಕರಾಟೆ ಅಭ್ಯಾಸ ಮಾಡುವುದರಿಂದ ಆತ್ಮಸ್ಥೈರ್ಯದೊಂದಿಗೆ ಧೈರ್ಯವೂ ಹೆಚ್ಚಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರೂ ಆದ ಕರಾಟೆ ತರಬೇತುದಾರ ಜಮ್ಮಡ ಜಯಜೋಯಪ್ಪ ತಿಳಿಸಿದರು.
ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಹಾಗೂ ಬೆಲ್ಟ್ಗಳನ್ನು ವಿತರಿಸಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಕರಾಟೆ ಪ್ರಾಣ ರಕ್ಷಣೆಗಾಗಿ ಯಾವುದೇ ಆಯುಧಗಳಿಲ್ಲದೆ ಬಳಸಬಹುದಾದ ಬಹುದೊಡ್ಡ ವಿದ್ಯೆ. ಕರಾಟೆಯನ್ನು 5 ಸಾವಿರ ವರ್ಷಗಳ ಹಿಂದೆಯೇ ಬೌದ್ಧ ಧರ್ಮದ ಬಿಕ್ಕು ಪರಿಚಯಿಸಿದ್ದರು. ಟಿಬೆಟ್ನಿಂದ ಆಗಮಿಸಿ ಭಾರತದಲ್ಲಿ ಇದನ್ನು ಪರಿಚಯಿಸಿದರು. ವನ್ಯ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಈ ಕಲೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ನಂತರದಲ್ಲಿ ಇದು ಪ್ರಾಣ ರಕ್ಷಣೆಗೂ ವಿದ್ಯೆಯಾಯಿತು ಎಂದರು.
ಕೊಡಗಿನ ಎಲ್ಲ ಭಾಗದಲ್ಲೂ ಕರಾಟೆ ಅಭ್ಯಾಸ ನಿರಂತರವಾಗಿ ನಡೆಯುತ್ತಿದೆ. ಅಧಿಕ ಸಂಖ್ಯೆಯಲ್ಲಿ ಉತ್ತಮ ತರಬೇತಿದಾರರು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಈ ಕಲೆಯನ್ನು ಪರಿಚಯಿಸುತ್ತಿದ್ದಾರೆ ಎಂದರು.
ಬ್ಲಾೃಕ್ ಬೆಲ್ಟ್ ಪಡೆದ ಎಂ.ಆರ್.ಸುಮನ್, ಐ.ಎಂ.ಮನ್ವಿತಾ, ಎಂ.ಎಂ.ತಂಗಮ್ಮ, ಬಿ.ಡಿ.ನಿಶ್ಚಲ್ ಹಾಗೂ ಬಿ.ಡಿ.ನಿಹಾಲ್ ಅವರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.