ಬೆಂಗಳೂರು: ರಾಜ್ಯ ಸರ್ಕಾರ ಜನರಿಗೆ ‘ಗುಳೆ ಗ್ಯಾರಂಟಿ’ ಕೊಟ್ಟಿದೆ ಎಂಬ ವಿಪಕ್ಷ ನಾಯಕ ಅಶೋಕ್ ಅವರ ಟೀಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ಭೀಕರ ಬರದ ನಡುವೆಯೂ ರಾಜ್ಯದ ಜನ ಮೂರೊತ್ತಿನ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ಸರ್ಕಾರದ ಯೋಜನೆಗಳೇ ಕಾರಣ ಹೊರತು, ಇವರು ಕುರುಡಾಗಿ ಆರಾಧಿಸುವ ಮೋದಿಯವರಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಬರದಿಂದ ತತ್ತರಿಸುವ ರೈತರಿಗೆ 2 ಸಾವಿರ ಪರಿಹಾರ ನೀಡುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಏನು ನೆರವು ಸಿಕ್ಕಿದೆ ಎಂದು ಹೇಳುವ ಧಮ್ ಅಶೋಕ್ರವರಿಗಿದೆಯೇ? ನಾವು ಕೇಂದ್ರದ ಬಳಿ ಬಿಟ್ಟಿ ಕೊಡಿ ಎಂದು ಅಂಗಲಾಚುತ್ತಿಲ್ಲ. ನಮಗೆ ಬರಬೇಕಾದ ತೆರಿಗೆ ಅನುದಾನದ ಪಾಲು, ಬರ ಪರಿಹಾರದ ಪಾಲನ್ನು ಅಧಿಕಾರಯುತವಾಗಿ ಕೇಳುತ್ತಿದ್ದೇವೆ. ಅದು ನಮ್ಮ ನ್ಯಾಯಯುತವಾದ ಬೇಡಿಕೆ ಕೂಡ ಹೌದು ಎಂದು ಹೇಳಿದ್ದಾರೆ.
ಈಗ ಮೊಸಳೆ ಕಣ್ಣೀರು ಸುರಿಸುತ್ತಾ ಸಿದ್ದರಾಮಯ್ಯರ ಮಾನವೀಯತೆಯನ್ನು ಪ್ರಶ್ನಿಸುವ ಅಶೋಕ್ರವರಿಗೆ ಇದೇ ಪ್ರಶ್ನೆಯನ್ನು ಮೋದಿಯವರಿಗೆ ಕೇಳಲು ಸಾಧ್ಯವಿದೆಯೇ? ವಾರ್ಷಿಕವಾಗಿ ರೈತರಿಗೆ 6 ಸಾವಿರ ಕೊಡುವುದನ್ನೇ ದೊಡ್ಡ ಸಾಧನೆ ಎಂದು 24 ಗಂಟೆ ಜಾಹಿರಾತು ಕೊಡುವ ಮೋದಿಯವರು, ಅದೇ ಜಾಹಿರಾತಿಗೆ ಕೊಟ್ಟ ಹಣವನ್ನು ಬರ ಪರಿಹಾರದ ರೂಪದಲ್ಲಿ ಕೊಟ್ಟಿದ್ದರೆ, ರಾಜ್ಯದ ರೈತರು ಇಷ್ಟು ಕಷ್ಟ ಎದುರಿಸಬೇಕಾದ್ ಪ್ರಮೇಯವೇ ಇರುತ್ತಿರಲಿಲ್ಲ. ಅಶೋಕ್ರವರೆ, ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತೆ ನಮ್ಮ ಮುಂದೆ ನಿಮ್ಮ ಪೌರುಷ ತೋರಿಸಬೇಡಿ ಎಂದು ಕುಟುಕಿದ್ದಾರೆ.