ನವದೆಹಲಿ: ಲಡಾಖ್ನ ಪೂರ್ವಭಾಗದ ವಾಸ್ತವ ಗಡಿರೇಖೆಯ ಬಳಿ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಉದ್ವಿಗ್ನತೆ ಸದ್ಯಕ್ಕೆ ತಣಿಯುವ ಲಕ್ಷಣಗಳು ಕಾಣುತ್ತಿಲ್ಲ. ವಿವಾದಾತ್ಮಕ ಪ್ರದೇಶಗಳಲ್ಲಿ ನಿಯೋಜನೆಗೊಳಿಸಿದ್ದ ಸೇನೆಯನ್ನು ಉಭಯ ರಾಷ್ಟ್ರಗಳು ಸಣ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆದುಕೊಂಡಿವೆ. ಆದರೆ, ಮಾತುಕತೆ ಸಫಲವಾಗಿ ಸಂಪೂರ್ಣ ಸೇನೆಯನ್ನು ಹಿಂಪಡೆದುಕೊಂಡು 2020ರ ಏಪ್ರಿಲ್ನಲ್ಲಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವಷ್ಟರಲ್ಲಿ ಚಳಿಗಾಲ ಆರಂಭವಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಸೇನೆಯನ್ನು ಹಿಂಪಡೆದುಕೊಳ್ಳುವ ಕುರಿತು ಭಾರತ ಮತ್ತು ಚೀನಾದ ಮಿಲಿಟರಿ ಕಮಾಂಡರ್ಗಳ ನಡುವೆ ಈ ವಾರದ ಆರಂಭದಲ್ಲಿ ನಡೆದ ಮಾತುಕತೆ ಮುಂದಿನ ವಾರಕ್ಕೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ಗಲ್ವಾನ್ ಕಣಿವೆಯಲ್ಲಿ ಜೂ.15ರಂದು ನಡೆದ ರಕ್ತಸಿಕ್ತ ಘರ್ಷಣೆಯ ನಂತರದಲ್ಲಿ ಸೇನೆಯನ್ನು ಹಿಂಪಡೆಯುವ ಕುರಿತು ಭಾರತ ಕೆಲವೊಂದು ನಿರ್ದಿಷ್ಟ ವಿಷಯಗಳನ್ನು ಪ್ರತಿಪಾದಿಸಿದ್ದು, ಅವುಗಳಿಗೆ ಸಮ್ಮತಿಸಲೇ ಬೇಕು ಎಂದು ಪಟ್ಟು ಹಿಡಿದುಕೊಂಡು ಕುಳಿತಿದೆ.
ಮಾತುಕತೆ ಸಕಾರಾತ್ಮಕ ಮನೋಭಾವದೊಂದಿಗೆ ರಚನಾತ್ಮಕವಾಗಿ ಮುಂದುವರಿಯುತ್ತಿದ್ದರೂ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ತುಂಬಾ ದೀರ್ಘವಾಗಲಿರುವುದು ಖಂಡಿತ ಎಂದು ಹೇಳಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಚಳಿಗಾಲವೂ ಬಂದು ಅನಿವಾರ್ಯವಾಗಿ ಸೇನೆಯನ್ನು ಹಿಂಪಡೆದುಕೊಳ್ಳಬೇಕಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಸ್ಥಿರವಾಗಿ ಕ್ಷೀಣಿಸುತ್ತಿದೆ ಯುವಶಕ್ತಿ, ಹಿರಿಯ ನಾಗರಿಕರ ದೇಶವಾಗುತ್ತಾ ಭಾರತ?
ಲಡಾಖ್ ಬಿಕ್ಕಟ್ಟು ಚೀನಾದ ಪಾಲಿಗೆ ಜಾಗತಿಕವಾಗಿ ಪ್ರತಿಷ್ಠೆಯ ವಿಷಯವಾಗಿದೆ. ಒಂದು ವೇಳೆ ಸೇನೆಯನ್ನು ಹಿಂಪಡೆದುಕೊಂಡರೆ, ತನ್ನ ಭಾಗದ ನೆಲವನ್ನು ಭಾರತಕ್ಕೆ ಬಿಟ್ಟುಕೊಟ್ಟಂತೆ ಆಗುತ್ತದೆ ಎಂಬುದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಭಾವನೆಯಾಗಿದೆ. ಹೀಗಿರುವಾಗ ಭಾರತ ಕೂಡ ಭೂಮಿಯ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದು, ವಾಸ್ತವ ಗಡಿರೇಖೆಯ ಬಳಿ ಜಮಾವಣೆ ಮಾಡಿರುವ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದಿದೆ.
ಅಷ್ಟೇ ಅಲ್ಲ, ಫಿಂಗರ್ 4-8ರವರೆಗೆ ಚೀನಾದ ಯೋಧರು ಟೆಂಟ್ಗಳನ್ನು ಹಾಕಿಕೊಂಡು ಕುಳಿತಿದ್ದಾರೆ. ಇದು ಗಸ್ತು ತಿರುಗುವ ಮಾರ್ಗವಾಗಿದ್ದು, ಈ ಬಗ್ಗೆ ಚೀನಿಯರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ವಾಸ್ತವ ಗಡಿರೇಖೆಯ ಭಾರತದ ಭಾಗದಲ್ಲಿ ರಸ್ತೆ ಮತ್ತಿತರ ಮೂಲಸೌಕರ್ಯಗಳ ಕೊರತೆ ಇದ್ದ ಹಿನ್ನೆಲೆಯಲ್ಲಿ ಭಾರತೀಯರು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿರಲಿಲ್ಲ. ಆದರೆ, ಈಗ ಮೂಲಸೌಕರ್ಯಗಳು ಅಭಿವೃದ್ಧಿಯಾಗಿರುವ ಕಾರಣ, ಗಸ್ತು ತಿರುಗಲಾರಂಭಿಸಿರುವುದು ಚೀನಿ ಯೋಧರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದಂತಾಗಿರುವುದು ಇದಕ್ಕೆ ಕಾರಣ.
ಕರೊನಾ ಶಂಕಿತ ಮೃತಪಟ್ಟರೆ ವರದಿಗೆ ಕಾಯಬೇಕಿಲ್ಲ: ಕೇಂದ್ರ ಹೇಳಿರುವುದೇನು?