ದಾವಣಗೆರೆ: ನವದುರ್ಗೆಯರ ಆಶೀರ್ವಾದದಿಂದ ಭವರೋಗ ಕರೊನಾ ನಿರ್ಮೂಲನೆಯಾಗಲಿ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.
ವಿಶ್ವ ಹಿಂದು ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿಯಿಂದ ನಗರದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬುಛೇದನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದುರ್ಗಾ ಮಾತೆಯು ಕರೊನಾ ಜತೆಗೆ ನಮ್ಮೊಳಗಿ ದೋಷಗಳನ್ನೂ ನಿವಾರಿಸಲಿ. ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ, ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ಒಳಿತು ಮಾಡುವಂತೆ ದೇವಿಯನ್ನು ಪ್ರಾರ್ಥಿಸೋಣ ಎಂದರು.
ಭಯೋತ್ಪಾದನೆ, ಮತಾಂತರದಂಥ ಸಮಸ್ಯೆಗಳು ಹಿಂದು ಧರ್ಮವನ್ನು ಕಾಡುತ್ತಿವೆ. ಸನಾತನ ಹಿಂದು ಧರ್ಮದ ರಕ್ಷಣೆಯಾಗಬೇಕಿದೆ ಎಂದರು.
ಆರ್.ಎಸ್.ಎಸ್. ಶಿವಮೊಗ್ಗ ವಿಭಾಗದ ಸಹವಿಭಾಗ ಪ್ರಚಾರಕ ನವೀನ ಸುಬ್ರಹ್ಮಣ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದ ಹಿನ್ನೆಲೆಯಲ್ಲಿ ಈ ಬಾರಿಯ ವಿಜಯದಶಮಿ ಆಚರಣೆಯು ವಿಶೇಷ ಖುಷಿ ತಂದಿದೆ ಎಂದು ಹೇಳಿದರು.
ರಾಮಾಯಣ ಭಾರತೀಯರ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ದೀರ್ಘ ಕಾಲದ ಹೋರಾಟ ಫಲ ನೀಡಿದೆ. ಈ ಮಂದಿರ ಹಿಂದು ಸ್ವಾಭಿಮಾನದ ಸಂಕೇತ. ಭಾರತ ಸ್ವಾಭಿಮಾನದ ಕಡೆಗೆ ಸಾಗುತ್ತಿದೆ ಎಂದು ತಿಳಿಸಿದರು.
ಅಂಬುಛೇದನ ನೆರವೇರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಒಂದು ಕಡೆ ಕರೊನಾ, ಇನ್ನೊಂದು ಕಡೆ ಚುನಾವಣಾ ನೀತಿ ಸಂಹಿತೆ ಇರುವ ಕ್ಲಿಷ್ಟಕರ ಸನ್ನಿವೇಶದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದು ರಾಜಕೀಯೇತರ ಕಾರ್ಯಕ್ರಮ. 2ನೇ ಬಾರಿಗೆ ಅಂಬುಛೇದನ ಮಾಡುವ ಅವಕಾಶ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.