More

    ಪರಿಹಾರದ ಹಣ, ಸಾಲಕ್ಕೆ ತೀರುವಳಿ ಬೇಡ   ಬ್ಯಾಂಕ್ ಅಧಿಕಾರಿಗಳಿಗೆ ಡಿಸಿ ಡಾ.ವೆಂಕಟೇಶ್ ಸೂಚನೆ

    ದಾವಣಗೆರೆ: ರೈತರು ಬೆಳೆನಷ್ಟ ಅನುಭವಿಸಿದ್ದು ಇವರಿಗೆ ಇನ್‌ಪುಟ್ ಸಬ್ಸಿಡಿ, ಬೆಳೆ ವಿಮಾ ಪರಿಹಾರ ಹಾಗೂ ಉದ್ಯೋಗ ಖಾತ್ರಿಯಡಿ ಕೂಲಿ ಹಣವನ್ನು ಖಾತೆಗೆ ಜಮೆ ಮಾಡಲಾಗಿದೆ. ಇದನ್ನು ರೈತರು ಪಡೆದ ಬ್ಯಾಂಕ್ ಸಾಲಕ್ಕೆ ತೀರುವಳಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸೂಚಿಸಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ರೈತರ‌್ಯಾರು ಬಿಎಂಡಬ್ಲುೃ ಕಾರು  ಇಟ್ಟುಕೊಂಡಿಲ್ಲ. ಅವರಿಗೆ ಸಿಗುವ ಹತ್ತಾರು ಸಾವಿರದಲ್ಲಿ ಬೀಜ, ಗೊಬ್ಬರಕ್ಕೆ ಉಪಯೋಗ ಮಾಡಿಕೊಳ್ಳುವರು. ಆದ್ದರಿಂದ ಯಾವುದೇ ಬ್ಯಾಂಕ್‌ನವರು ಬೆಳೆ ಪರಿಹಾರ, ಖಾತ್ರಿ ಹಣವನ್ನು ಬಾಕಿ ಸಾಲಕ್ಕೆ ಮುರಿದುಕೊಳ್ಳಬಾರದು. ಒಂದು ವೇಳೆ ತೀರುವಳಿ ಮಾಡಿಕೊಂಡಲ್ಲಿ ಅಂತಹ ಬ್ಯಾಂಕ್ ಅಧಿಕಾರಿಗಳ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲಾಗುತ್ತದೆ ಎಂದರು.
    ದಾಖಲಾತಿ ಸರಿಪಡಿಸಿ
    ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವಾಗಿ ಎರಡನೇ ಕಂತಿನಲ್ಲಿ ಜಿಲ್ಲೆಯ 69575 ರೈತರಿಗೆ 44.35 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ. 11597 ರೈತರಿಗೆ ಪರಿಹಾರ ಬಿಡುಗಡೆ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ಸರಿಪಡಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
    ಮೊದಲ ಕಂತಿನಲ್ಲಿ ತಲಾ 2 ಸಾವಿರ ರೂ.ನಂತೆ  82,928 ರೈತರು, ಎರಡನೇ ಹಂತದಲ್ಲಿ 69575 ರೈತರಿಗೆ ಒಟ್ಟು 60.23 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ 11597 ರೈತರ ಖಾತೆಯ ವಿವರಗಳು ಸರಿಯಾಗಿರದ ಕಾರಣ ಬಿಡುಗಡೆ ಮಾಡಲಾಗಿಲ್ಲ ಎಂದರು.
    ಇದರಲ್ಲಿ 5575 ರೈತರ ಖಾತೆಗಳು ಆಧಾರ್ ಜೋಡಣೆಯಾಗಿಲ್ಲ.  ಐಎಫ್‌ಎಸ್‌ಸಿ ಕೋಡ್ ತಪ್ಪಾಗಿರುವ 3696, ಫ್ರೂಟ್ಸ್ ಮತ್ತು ಆಧಾರ್‌ಗೆ ತಾಳೆಯಾಗದ 1684 ಸೇರಿದಂತೆ ಇತರೆ ಕಾರಣದಿಂದ ಪಾವತಿ ಮಾಡಲು ಸಾಧ್ಯವಾಗಿಲ್ಲ.
     ಎಲ್ಲಾ ತಾಲೂಕುಗಳಲ್ಲಿ ಪರಿಹಾರದ ಬಗ್ಗೆ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ 1374 ಕರೆ ಸ್ವೀಕರಿಸಲಾಗಿದೆ. ಬ್ಯಾಂಕ್‌ಗಳಲ್ಲಿ  ಪ್ರತ್ಯೇಕವಾಗಿ ಸಹಾಯ ಮೇಜು ಸ್ಥಾಪನೆ ಮಾಡಬೇಕು. ಆಧಾರ್ ಸೀಡಿಂಗ್ ಮತ್ತು ಆಧಾರ್‌ನಂತೆ ಬ್ಯಾಂಕ್ ಖಾತೆ ತಿದ್ದುಪಡಿ ಮೂಲಕ ಶೀಘ್ರವೇ ರೈತರ ಖಾತೆಗಳಿಗೆ ಪರಿಹಾರ ಜಮೆ ಮಾಡಲು ದಾಖಲೆಗಳನ್ನು ಸರಿಪಡಿಸಬೇಕೆಂದರು.
     ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ ವಿಕಲಾಂಗರಿಗೆ ಬರುವ ಮಾಸಾಶನದ ಹಣವನ್ನು ಅವರ ಸಾಲಕ್ಕೆ ಚುಕ್ತಾ ಮಾಡಿಕೊಳ್ಳಲಾಗುತ್ತಿದೆ ಎಂದು ದೂರುಗಳಿವೆ. ಸರ್ಕಾರ ಅವರ ಜೀವನ ಮಟ್ಟ ಸುಧಾರಣೆ ಮಾಡಲು ಮಾಸಾಶನ ನೀಡುತ್ತಿದೆ.ಹೀಗಾಗಿ ಅದನ್ನು ಸಾಲಕ್ಕೆ ತೀರುವಳಿ ಮಾಡದಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಲೀಡ್ ಬ್ಯಾಂಕ್ ಮುಖ್ಯಪ್ರಬಂಧಕ ಪ್ರಕಾಶ್ ಇತರೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts