ದಾವಣಗೆರೆ: ವಿಜ್ಞಾನದ ಸಾಲು ಸಾಲು ಆವಿಷ್ಕಾರಗಳು ಕಂಡುಬಂದರೂ ನಾಗರಿಕತೆ ಕುರಿತಂತೆ ಜಿಜ್ಞಾಸೆ ಮೂಡಿಸಿವೆ ಎಂದು ಹೈದರಾಬಾದ್ ವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ರೀಸೆಂಟ್ ಅಡ್ವಾನ್ಸಸ್ ಇನ್ ಸಾಲಿಡ್ ಸ್ಕೇಟ್ ಫಿಜಿಕ್ಸ್ ಅಂಡ್ ಇಟ್ಸ್ ಅಪ್ಲಿಕೇಷನ್ ವಿಷಯ ಕುರಿತು ನಗರದ ಧರಾಮ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.
ವಿಜ್ಞಾನ ಬೆಳೆದಂತೆಲ್ಲ ನಾವೆತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಮೂಡುತ್ತಿದೆ. ವಿಜ್ಞಾನ ಜಾಗತಿಕ ವಿಷಯ ವಾದ್ದರಿಂದ ವಿವಿಧ ದೇಶಗಳ ವೈವಿಧ್ಯಮಯ ಸಂಸ್ಕೃತಿ ಬಗ್ಗೆ ಆಳ ಅಧ್ಯಯನದ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಶಾಸ್ತ್ರೀಯ ಕನ್ನಡದ ಬಗ್ಗೆ ಅರಿವಿದೆ. ಆದರೆ ಶಾಸ್ತ್ರೀಯವಾಗಿ ಸಂಸ್ಕೃತವನ್ನು ಅಧ್ಯಯನ ಮಾಡಿದ ವಿದ್ವಾಂಸರು ಕಡಿಮೆ. ಇಂಗ್ಲೆಂಡ್ ಸರ್ಕಾರ ತನ್ನ ಸಂಸ್ಕೃತಿಯನ್ನು ಜೀವಂತವಿರಿಸಲು ಮಾಡಿದ ಕೆಲ ನೀತಿಗಳಿಂದಾಗಿ ಷೇಕ್ಸ್ಪಿಯರ್ ಇಂದಿಗೂ ಉಳಿದಿದ್ದಾರೆ. ಇಂತಹ ಕೆಲಸ ನಮ್ಮಲ್ಲಿ ಆಗಲಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ ಅಧ್ಯಾಪಕರಿಗೆ ಅಧ್ಯಯನ, ಅಧ್ಯಾಪನ, ಸಂಶೋಧನೆ ಮೂರರ ಅಗತ್ಯವಿದೆ. ಇಂತಹ ವಿಚಾರ ಸಂಕಿರಣಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಇತರೆ ವಿಷಯಗಳ ತಿಳಿವಳಿಕೆ ನೀಡಬೇಕಿದೆ ಎಂದರು.
ಬಿಐಇಟಿ ಎಂಬಿಎ ಕಾಲೇಜಿನ ನಿರ್ದೇಶಕ ಡಾ.ಎಚ್.ವಿ. ಸ್ವಾಮಿ ತ್ರಿಭುವಾನಂದ ಮಾತನಾಡಿ, ಹೊಸ ಜೀವನಕ್ಕೆ ವಿಜ್ಞಾನ ಬೇಕು. ಆದರೆ ಮಿತಿಯಲ್ಲಿರಬೇಕು. ವಿಜ್ಞಾನದಿಂದ ಸಮಾಜೋಪಯೋಗಿ ಸಂಶೋಧನೆಗಳು ಆಗಬೇಕಿದೆ ಎಂದು ತಿಳಿಸಿದರು.