ಬೆಂಗಳೂರು: ಕರೊನಾ ಸೋಂಕಿತರ ಡಿಸ್ಚಾರ್ಜ್ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಶಿಷ್ಟಾಚಾರ ಆಧರಿಸಿ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ರೋಗಿಯನ್ನು 14 ದಿನಗಳ ಬದಲಿಗೆ 10 ದಿನಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ ಎಂದು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ. ಸೋಂಕಿತ ರೋಗಿ ಬಿಡುಗಡೆ ಹೊಂದುವ 3 ದಿನಗಳ ಮುಂಚಿತವಾಗಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರಬಾರದು. ಬಿಡುಗಡೆಗೂ ಮುನ್ನ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಬೇಕು. ವರದಿಯಲ್ಲಿ ನೆಗೆಟಿವ್ ಬಂದರೆ ಡಿಸ್ಚಾರ್ಜ್ ಮಾಡಬಹುದು. ಇಲ್ಲವೆ ಪರೀಕ್ಷೆ ನಡೆಸಿದ 72 ಗಂಟೆಗಳ ಬಳಿಕ ಮತ್ತೊಂದು ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಬಿಡುಗಡೆ ಮಾಡಬಹುದು.
ರೋಗ ಲಕ್ಷಣ ರಹಿತ (ಎ-ಸಿಂಪ್ಟಮ್ಯಾಟಿಕ್) ಸೋಂಕಿತರಿಗೆ: ಗುಣಮುಖರಾಗಿ ಕಂಡುಬಂದರೂ ಮೊದಲ ಪರೀಕ್ಷೆ ನಡೆದ 7 ದಿನಗಳ ಬಳಿಕ ಮತ್ತೊಮ್ಮೆ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿಯೇ ಬಿಡುಗಡೆ ಮಾಡಬೇಕು. ಇವರಿಗೆ ಪುನರಾವರ್ತಿಕ ಪರೀಕ್ಷೆ ನಡೆಸುವುದು ಕಡ್ಡಾಯ. ಬಿಡುಗಡೆ ಹೊಂದಿದ ಎಲ್ಲ ರೋಗಿಗಳಿಗೆ 14 ದಿನ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಬೇಕೆಂದು ತಿಳಿಸಿದ್ದಾರೆ.