ಬೆಂಗಳೂರು: ಕರೊನಾ ಬಂದಿದ್ದೇ ಬಂದಿದ್ದು, ಆ ಕುರಿತು ಹಲವು ಸಿನಿಮಾಗಳನ್ನು ಮಾಡಲು ಸಾಕಷ್ಟು ನಿರ್ದೇಶಕರು ಸಜ್ಜಾಗಿದ್ದಾರೆ. ಕಥೆ ಬರೆದು, ನಿರ್ಮಾಪಕರನ್ನು ಹುಡುಕುತ್ತಿದ್ದಾರೆ. ಇನ್ನು ಕೆಲವರು ಹಲವು ಶೀರ್ಷಿಕೆಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಇದೀಗ ಮಠ, ಎದ್ದೇಳು ಮಂಜುನಾಥ್ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕರೊನಾ ಲಾಕ್ಡೌನ್ ಕುರಿತು ಸಿನಿಮಾ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ ಎಲ್ಲವನ್ನೂ ಬರೆದು ಮುಗಿಸಿದ್ದಾರಂತೆ. ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆಯಂತೆ.
ಹೌದು, ಇನ್ನೇನಿದ್ದರೂ ತಾರಾಗಣ ಪಕ್ಕಾ ಮಾಡಿಕೊಂಡು, ಕರೊನಾ ಹಾವಳಿ ಶಾಂತವಾದ ಬಳಿಕ ಶೂಟಿಂಗ್ ಶುರುಮಾಡಲಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾವನ್ನು ಆ್ಯಪ್ ಮೂಲಕ ತೋರಿಸುವ ಲೆಕ್ಕಾಚಾರ ನಿರ್ದೇಶಕರದ್ದು. ಈಗಾಗಲೇ ಆ್ಯಪ್ ಅಭಿವೃದ್ಧಿಪಡಿಸುವಿಕೆಯ ಕೆಲಸ ಶುರುವಾಗಿದ್ದು, 100 ರೂ. ಕೊಟ್ಟು ಆ್ಯಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಸಿನಿಮಾ ನೋಡಬಹುದಂತೆ. ಇನ್ನು ಈ ಸಿನಿಮಾ ಒಂದೆಡೆಯಾದರೆ, ನವರಸನಾಯಕ ಜಗ್ಗೇಶ್ ಜತೆ ರಂಗನಾಯಕ ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲೂ ಗುರುಪ್ರಸಾದ್ ಬಿಜಿಯಾಗಿದ್ದಾರೆ. ಆ ಚಿತ್ರದ ಕೆಲಸಗಳೂ ಸಹ ಲಾಕ್ಡೌನ್ ಮುಗಿದ ಬಳಿಕ ಶುರುವಾಗುವ ಸಾಧ್ಯತೆಗಳಿವೆ.