ನವದೆಹಲಿ: ಉತ್ತಮ ಆಟಗಾರರನ್ನು ತಂಡದಿಂದ ಹೊರಗಿಡುತ್ತಿರುವ ಪ್ರಸ್ತುತ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಸಂವಹನ ಕೊರತೆಯ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಂ.ಎಸ್.ಧೋನಿ ನಾಯಕರಾಗಿದ್ದಾಗಲೂ ಹೀಗೆ ಆಗುತ್ತಿತ್ತು ಎಂದು ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
ಯುವ ಆಟಗಾರ ರಿಷಭ್ ಪಂತ್ ಅವರನ್ನು ನಿರಂತರವಾಗಿ ಬೆಂಚ್ ಕಾಯಿಸುತ್ತಿರುವುದಕ್ಕೆ ಸೆಹ್ವಾಗ್ ಮಾತ್ರವಲ್ಲ ಸಾಕಷ್ಟು ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಸಂವಹನ ಕೊರತೆ ಎಂದು ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವೀರೂ, ಧೋನಿ ಅವರನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಧೋನಿ ಕೂಡ ಡ್ರೆಸ್ಸಿಂಗ್ ರೂಮ್ನಲ್ಲಿ ಯಾರೊಂದಿಗೂ ಸರಿಯಾಗಿ ಸಂವಹನ ನಡೆಸುತ್ತಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಟಾಪ್ ಆರ್ಡರ್ನಲ್ಲಿ ಬದಲಾವಣೆ ಮಾಡುತ್ತಿರುತ್ತೇನೆ. ಏಕೆಂದರೆ ಅವರು ಕ್ರೀಡಾಂಗಣದಲ್ಲಿ ಫೀಲ್ಡಿಂಗ್ ಮಾಡುವಾಗ ಮಂದಗತಿಯಲ್ಲಿರುತ್ತಾರೆ ಎಂದು 2012ರಲ್ಲಿ ಧೋನಿ ಮಾಧ್ಯಮವೊಂದರಲ್ಲಿ ಹೇಳಿದ್ದರು. ಆದರೆ, ಅವರೆಂದಿಗೂ ಅದೇ ವಿಚಾರವನ್ನು ಡ್ರೆಸ್ಸಿಂಗ್ ರೂಮ್ನಲ್ಲಿ ಚರ್ಚಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಗೆ ಅವಕಾಶ ನೀಡಬೇಕಾಗುತ್ತದೆ ಎಂಬ ಕಾರಣದಿಂದಲೇ ಟಾಪ್ ಆರ್ಡರ್ನಲ್ಲಿ ಬದಲಾವಣೆ ನಿಯಮ ಅಳವಡಿಸಿಕೊಳ್ಳಲಾಗಿದೆ ಎಂದು ಡ್ರೆಸ್ಸಿಂಗ್ ರೂಮ್ನಲ್ಲಿ ಮಾತುಕತೆ ನಡೆದಿದ್ದಾಗಿಯೂ ವೀರೂ ಬಹಿರಂಗಪಡಿಸಿದ್ದಾರೆ.
ನಮ್ಮ ಸಮಯದಲ್ಲಿ ನಾಯಕನಾದವನು ಆಟಗಾರರ ಹತ್ತಿರ ಹೋಗಿ ಮಾತುಕತೆ ನಡೆಸಬೇಕಿತ್ತು. ಇದೀಗ ಕೊಹ್ಲಿ ಇದೇ ರೀತಿ ಮಾಡುತ್ತಿದ್ದಾರೋ, ಇಲ್ಲವೋ ನನಗೆ ತಿಳಿದಿಲ್ಲ. ನಾನು ತಂಡದ ಭಾಗವಾಗಿಲ್ಲ. ಆದರೆ ಏಷ್ಯಾ ಕಪ್ಗೆ ನಾಯಕನಾಗಿ ರೋಹಿತ್ ಶರ್ಮಾ ಹೋಗಿದ್ದಾಗ ಅವರು ತಂಡದ ಎಲ್ಲ ಆಟಗಾರರ ಜತೆಯಲ್ಲಿಯೂ ಮಾತನಾಡುತ್ತಿದ್ದರೂ ಎಂದಿದ್ದಾರೆ.
ಸುಮ್ಮನೇ ಬೆಂಚ್ ಕಾಯಿಸಿದರೆ ರನ್ ಗಳಿಸುವುದು ಹೇಗೆ? ಸಚಿನ್ ಬೆಂಚ್ ಕಾದರೂ ಅವರು ಕೂಡ ರನ್ ಗಳಿಸಲು ಸಾಧ್ಯವಾಗುವುದಿಲ್ಲ. ನೀವು ರಿಷಭ್ನನ್ನು ಮ್ಯಾಚ್ ವಿನ್ನರ್ ಎಂಬ ಭಾವಿಸುವುದಾದರೆ ಏಕೆ ಆಟವಾಡಲು ಅವಕಾಶ ನೀಡುತ್ತಿಲ್ಲ? ಆತ ಸ್ಥಿರ ಪ್ರದರ್ಶನ ನೀಡುತ್ತಿಲ್ಲವೇ? ಎಂದು ವೀರೂ ರಿಷಭ್ರನ್ನು ಬೆಂಚ್ ಕಾಯಿಸುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್)